ಮಾ.15: ಉಡುಪಿ ಬಿಜೆಪಿ ಎಸ್.ಟಿ ಮೋರ್ಚಾದಿಂದ ಶಿವಾಜಿ ಸಂಗಮ
ಉಡುಪಿ ನಗರ ಬಿಜೆಪಿ ಎಸ್.ಟಿ ಮೋರ್ಚಾ ಇದರ ವತಿಯಿಂದ ಮರಾಠಿ ಸಂಸ್ಕೃತಿ ಹಾಗೂ ಪರಂಪರೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಶಿವಾಜಿ ಸಂಗಮ ಕಾರ್ಯಕ್ರಮವನ್ನು ಮಾ. 15ರಂದು ಉಡುಪಿಯ ಕುಂಜಿಬೆಟ್ಟು ಬಿಜೆಪಿ ಕಚೇರಿ ಬಳಿ ಆಯೋಜಿಸಲಾಗಿದೆ ಎಂದು ಉಡುಪಿ ನಗರ ಬಿಜೆಪಿ ಎಸ್.ಟಿ ಮೋರ್ಚಾ ಇದರ ಅಧ್ಯಕ್ಷೆ ಸುಮಲತಾ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮಾ. 15 ರ ಸಂಜೆ 4.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಶಾಸಕ ಯಶ್ಪಾಲ್ ಸುವರ್ಣ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ, ಉಡುಪಿ ನಗರ ವ್ಯಾಪ್ತಿಯ 18 ಹತ್ತರಕಟ್ಟೆಯ 18 ಮಂದಿ ಗುರಿಕಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಅಲ್ಲದೇ ಸಮಾರಂಭದಲ್ಲಿ ಸಮುದಾಯಕ್ಕೆ ಸಿಗುತ್ತಿರುವ ಸವಲತ್ತುಗಳ ಪ್ರತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸುಮಾರು 800 ಮಂದಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಕಾರ್ಯದರ್ಶಿ ವಿನಯ್ , ಪ್ರಧಾನ ಕಾರ್ಯದರ್ಶಿ ಸುಗುಣ ನಾಯ್ಕ್, ಉಪಾಧ್ಯಕ್ಷ ನವೀನ್ ನಾಯ್ಕ್ , ಪದಾಧಿಕಾರಿ ರಾಹುಲ್ ನಾಯ್ಕ್ ಉಪಸ್ಥಿತರಿದ್ದರು.