ಜೂ.1ರಿಂದ ಬೆಳ್ತಂಗಡಿಯ ಚಾರಣ ತಾಣಗಳ ಮೇಲಿನ ನಿರ್ಬಂಧ ತೆರವು
Tuesday, May 26, 2026
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಜನಪ್ರಿಯ ಚಾರಣ ತಾಣಗಳಾದ ನೇತ್ರಾವತಿ ಪೀಕ್, ಬಂಡಾಜೆ ಜಲಪಾತ ಹಾಗೂ ಗಡಾಯಿಕಲ್ಲು ಪ್ರದೇಶಗಳನ್ನು ಅರಣ್ಯ ಇಲಾಖೆಯು ಜೂನ್ 1ರಿಂದ ಮತ್ತೆ ಸಾರ್ವಜನಿಕರ ವೀಕ್ಷಣೆಗೆ ತೆರೆಯಲು ನಿರ್ಧರಿಸಿದೆ.
ಕಾಡು ಪ್ರದೇಶಗಳಲ್ಲಿ ಸಂಭವಿಸಬಹುದಾದ ಅಗ್ನಿ ಅವಘಡಗಳನ್ನು ತಡೆಯುವ ಉದ್ದೇಶದಿಂದ ಹಾಗೂ ಹುಲಿ ಗಣತಿ ಕಾರ್ಯಾಚರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಈ ತಾಣಗಳಿಗೆ ಕೆಲಕಾಲ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಮಳೆಗಾಲ ಆರಂಭವಾಗುತ್ತಿರುವುದರಿಂದ ಕಾಡಿಚ್ಚಿನ ಅಪಾಯ ಕಡಿಮೆಯಾಗಿದ್ದು, ಹುಲಿ ಗಣತಿ ಪ್ರಕ್ರಿಯೆಯೂ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಮತ್ತೆ ಅವಕಾಶ ಕಲ್ಪಿಸಲಾಗಿದೆ.
ಪ್ರತಿ ವರ್ಷ ಸಾವಿರಾರು ಪ್ರಕೃತಿ ಪ್ರಿಯರು ಹಾಗೂ ಚಾರಣಾಸಕ್ತರನ್ನು ಆಕರ್ಷಿಸುವ ಈ ತಾಣಗಳು, ತಮ್ಮ ಮನಮೋಹಕ ನೈಸರ್ಗಿಕ ಸೌಂದರ್ಯ ಮತ್ತು ಸಾಹಸಮಯ ಟ್ರೆಕ್ಕಿಂಗ್ ಅನುಭವಕ್ಕಾಗಿ ಪ್ರಸಿದ್ಧಿಯಾಗಿವೆ. ಜೂನ್ 1ರಿಂದ ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸಿಗರಿಗೆ ಪ್ರವೇಶ ನೀಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಪ್ರವಾಸಿಗರು ಪರಿಸರ ಸಂರಕ್ಷಣೆ ಮತ್ತು ಅರಣ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
