ಸೋದೆ ಮಠದಲ್ಲಿ ಶುದ್ಧ ನೈವೇದ್ಯ ಸಮರ್ಪಣೆ ಅಭಿಯಾನ
ಸಾವಯವ ಕೃಷಿ ಉಳಿಸಿ ಬೆಳೆಸುವುದು ಅನ್ನ ತಿನ್ನುವ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ. ಈ ನಿಟ್ಟಿನಲ್ಲಿ ಶುದ್ಧ ನೈವೇದ್ಯ ಸಮರ್ಪಣಂ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ. 2028ರಲ್ಲಿ ಪ್ರಾರಂಭವಾಗುವ ಸೋದೆ ಮಠದ ಪರ್ಯಾಯದಲ್ಲಿ ಕೃಷ್ಣ ದೇವರಿಗೆ 365 ದಿನ 365 ಬಗೆಯ ದೇಸಿ ತಳಿಯ ಅಕ್ಕಿಯಿಂದ ಮಾಡಿದ ನೈವೇದ್ಯ ಸಮರ್ಪಿಸಲಾಗುವುದು ಎಂದು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಸೋದೆ ವಾದಿರಾಜ ಮಠದಲ್ಲಿ ತೀರ್ಥಹಳ್ಳಿ ಕೃಷಿ ಪ್ರಯೋಗ ಪರಿವಾರ ಸಂಸ್ಥೆ ಆಶ್ರಯದಲ್ಲಿ ನಡೆದ ಶುದ್ಧ ನೈವೇದ್ಯ ಸಮರ್ಪಣೆ ಅಭಿಯಾನದಲ್ಲಿ ರೈತರಿಗೆ ಬೊಗಸೆ ಭತ್ತದ ಬೀಜ ವಿತರಿಸಿ ಆಶೀರ್ವಚನ ನೀಡಿದರು.
ದೇವರಿಗೆ ಸಮರ್ಪಿಸುವ ವಸ್ತು ಪರಿಶುದ್ಧವಾಗಿರಬೇಕು. ಮನಸ್ಸು ಶುದ್ಧವಾಗಿರಲು ಆಹಾರ ಶುದ್ಧತೆಯೂ ಮುಖ್ಯ. ಪ್ರಸ್ತುತ ಎಲ್ಲಾ ಆಹಾರ ಪದಾರ್ಥಗಳು ವಿಷಪೂರಿತವಾಗಿದ್ದು, ಆಹಾರಕ್ಕಿಂತ ಔಷಧಿಯನ್ನೇ ಹೆಚ್ಚು ತೆಗೆದುಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಆಹಾರವೇ ಔಷಧಿಯಾಗಲು ಸಾವಯವ ಪದಾರ್ಥಗಳನ್ನೇ ಬಳಸಬೇಕು ಎಂದು ಹೇಳಿದರು.
ಸಾವಯವ ಮಿಷನ್ ಮಾಜಿ ಅಧ್ಯಕ್ಷ ಕೆ.ಆನಂದ್ ಮಾತನಾಡಿದರು. ಹಾದಿಗಲ್ಲು ಅಭಯ ಲಕ್ಸ್ಮಿ ನೃಸಿಂಹ ದೇವಸ್ಥಾನದ ಧರ್ಮದರ್ಶಿ ಲಕ್ಸ್ಮಿ ನಾರಾಯಣ್, ಕೃಷಿ ಪ್ರಯೋಗ ಪರಿವಾರದ ನಿರ್ವಾಹಕ ವಿಶ್ವಸ್ಥ ದಿನೇಶ್ ಸರು, ಸೋದೆ ಮಠದ ದಿವಾನ್ ಶ್ರೀನಿವಾಸ ತಂತ್ರಿ ಉಪಸ್ಥಿತರಿದ್ದರು. ಕೃಷಿ ಪರಿವಾರದ ಪ್ರಮುಖ್ ಅರುಣ್ ಕುಮಾರ್ ಬಿ.ಕೆ. ಸ್ವಾಗತಿಸಿದರು. ಶ್ರೀವತ್ಸ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ್ ಭಟ್ ವಂದಿಸಿದರು.
ರಾಜ್ಯಾದ್ಯಂತ 10 ಜಿಲ್ಲೆಗಳಿಂದ ಆಗಮಿಸಿದ ರೈತರು ವಿವಿಧ ದೇಸಿ ತಳಿ ಭತ್ತದ ಬೀಜವನ್ನು ಪಡೆದುಕೊಂಡರು.