ಧಾರ್ಮಿಕ ಕಾರ್ಯಕ್ರಮಗಳು ಸಮಾಜ ಸುಧಾರಣೆಗೆ ಸಹಕಾರಿಯಾಗಲಿ- ಪ್ರಸಾದ್ ರಾಜ್ ಕಾಂಚನ್
Saturday, May 30, 2026
ಕೊಡವೂರು ಶ್ರೀ ಮಹತೋಭಾರ ಶಂಕರನಾರಾಯಣ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಮಹಾರುದ್ರಯಾಗವನ್ನು ಯಶಸ್ವಿಗೊಳಿಸಲು ಶ್ರಮಿಸಿದ ಭಕ್ತರು, ಸೇವಾಕರ್ತರು, ಮಹಾರುದ್ರಯಾಗ ಸಮಿತಿ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವ ಸಭೆ ಶನಿವಾರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಪ್ರಸಾದ್ ರಾಜ್ ಕಾಂಚನ್, “ಶ್ರೀ ಶಂಕರನಾರಾಯಣ ದೇವರ ಕೃಪೆಯಿಂದ ನನ್ನ ಮೂಲಕ ಮಹಾರುದ್ರಯಾಗ ಯಶಸ್ವಿಯಾಗಿ ನೆರವೇರಿದೆ. ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವುದರ ಜೊತೆಗೆ ಸಮಾಜ ಸುಧಾರಣೆಗೆ ಸಹಕಾರಿಯಾಗಬೇಕು. ಆ ನಿಟ್ಟಿನಲ್ಲಿ ಮಹಾರುದ್ರಯಾಗ ತನ್ನ ಉದ್ದೇಶವನ್ನು ಈಡೇರಿಸಿದೆ” ಎಂದು ಹೇಳಿದರು.
ಯಾಗದಲ್ಲಿ ವಿವಿಧ ಧಾನ್ಯಗಳನ್ನು ಬಳಕೆ ಮಾಡಲಾಗಿದ್ದು, ಇದರಿಂದ ಜಿಲ್ಲೆ ಮಾತ್ರವಲ್ಲದೆ ದೇಶದ ಸುಭಿಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು. ಭಜನಾ ಮಂಡಳಿಗಳು, ವಿವಿಧ ಸಂಘ–ಸಂಸ್ಥೆಗಳು, ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ್ದಾರೆ. ಎಲ್ಲರ ಸಹಕಾರದಿಂದ ಮಹಾರುದ್ರಯಾಗ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಹಾರುದ್ರಯಾಗದ ಯಶಸ್ಸಿಗೆ ಸಹಕರಿಸಿದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಲಾಯಿತು.
ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಉದ್ಯಮಿಗಳಾದ ಆನಂದ ಸುವರ್ಣ, ಸಾಧು ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಸಮಿತಿಯ ಪ್ರಧಾನ ಸಂಚಾಲಕರಾದ ತಾರಾನಾಥ ಪೂಜಾರಿ, ಕೃಷ್ಣಮೂರ್ತಿ ಆಚಾರ್ಯ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಸಮಿತಿ ಸದಸ್ಯರಾದ ವಾದಿರಾಜ ಸಾಲ್ಯಾನ್ ಭಾಸ್ಕರ್ ಪಾಲನ್, ಉಷಾ ಆನಂದ ಸುವರ್ಣ, ಶೀಲಾ ದೇವಾಡಿಗ ,ರಾಜೇಶ್ ಶೇರಿಗಾರ್, ಕೆ. ಬಾಬು, ಯಶೋಧರ್ ಸಾಲ್ಯನ್, ಗುರುರಾಜ್ ರಾವ್, ಅಶೋಕ್ ಕೊಡವೂರು, ಬಾಲಕೃಷ್ಣ ಕೊಡವೂರು ಜನಾರ್ಧನ್ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು.

