ಡ್ರಿಂಕ್ ಎಂಡ್ ಡ್ರೈವ್: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಕಾರು ಡಿಕ್ಕಿ
ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿಠ್ಠಲ್ ದಾಸ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಕುಮಾರ ಅವರು ರಾತ್ರಿ ಕರ್ತವ್ಯದಲ್ಲಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಬಲ್ಲಾಲ್ ಬಾಗ್ ಜಂಕ್ಷನ್ ಬಳಿ ವಾಹನ ಅಪಘಾತಕ್ಕೊಳಗಾದ ಪ್ರಕರಣವನ್ನು ಪರಿಶೀಲಿಸಿ ಠಾಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ,KA-19 MP-9623 ಸಂಖ್ಯೆಯ ಕಾರನ್ನು ಚಲಾಯಿಸುತ್ತಿದ್ದ ಧೀರಜ್ ರೈ ಎಂಬಾತನು ವೇಗವಾಗಿ ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಹೆಡ್ ಕಾನ್ಸ್ಟೇಬಲ್ ವಿಠ್ಠಲ್ ದಾಸ್ ಅವರು ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಟೋ ಮೂಲಕ ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ದಾಖಲಿಸಲಾಯಿತು.
ವೈದ್ಯರ ಪ್ರಕಾರ, ವಿಠ್ಠಲ್ ದಾಸ್ ಅವರ ಸ್ಪೈನಲ್ ಕಾರ್ಡ್ಗೆ ತೀವ್ರ ಗಾಯವಾಗಿದ್ದು, ಸೊಂಟದಿಂದ ಕೆಳಭಾಗಕ್ಕೆ ಶಕ್ತಿ ಕುಂದಿರುವುದಾಗಿ ತಿಳಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಕಾರು ಚಾಲಕ ಧೀರಜ್ ರೈ ಮದ್ಯಪಾನ ಮಾಡಿ, ರಾಂಗ್ ಸೈಡ್ನಲ್ಲಿ ವಾಹನ ಚಲಾಯಿಸಿಕೊಂಡು ಬಂದು ಅಪಘಾತ ಎಸಗಿರುವುದು ಬೆಳಕಿಗೆ ಬಂದಿದೆ.ಈ ಸಂಬಂಧ ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ BNS ಕಲಂ 281 ಹಾಗೂ 125(b) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.