ಬೀದಿನಾಯಿಯ ದಾಳಿಯಿಂದ ಗಾಯಗೊಂಡಿದ್ದ ಮುಳ್ಳುಹಂದಿಯ ರಕ್ಷಣೆ
Saturday, June 20, 2026
ಉಡುಪಿಯ ಚಿಟ್ಪಾಡಿ ಶ್ರೀನಿವಾಸ ನಗರದಲ್ಲಿ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿದ್ದ ಮುಳ್ಳುಹಂದಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಉಡುಪಿ ಶ್ರೀನಿವಾಸ ನಗರದಲ್ಲಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಮುಳ್ಳುಹಂದಿಯನ್ನು ಸ್ಥಳೀಯ ನಿವಾಸಿ ಧನಂಜಯ ದೇವಾಡಿಗ ಅವರು ಗಮನಿಸಿ ನಿತ್ಯಾನಂದ ಒಳಕಾಡುವರ ಗಮನಕ್ಕೆ ತಂದರು. ಸ್ಥಳಕ್ಕಾಗಮಿಸಿದ ನಿತ್ಯಾನಂದ ಒಳಕಾಡು ಅವರು ಗೋಣಿ ಚೀಲದ ಸಹಾಯದಿಂದ ಮುಳ್ಳುಹಂದಿಯನ್ನು ಸುರಕ್ಷಿತವಾಗಿ ಸೆರೆಹಿಡಿದು ರಕ್ಷಿಸಿದರು. ಮುಳ್ಳುಹಂದಿಯನ್ನು ಅರಣ್ಯ ಇಲಾಖೆಯ ಫಾರೆಸ್ಟರ್ ಶಿವಾನಂದ ಅವರು ಸ್ವೀಕರಿಸಿದ್ದು, ಅಗತ್ಯ ಚಿಕಿತ್ಸೆ ಮತ್ತು ಆರೈಕೆ ಒದಗಿಸಿ ಸಂಪೂರ್ಣ ಗುಣಮುಖವಾದ ಬಳಿಕ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.