ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಿದ್ದರಾಮಯ್ಯ ನೇಮಕ
ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಇದು ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ಸಮಿತಿಯಾಗಿದ್ದು, ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಿತಿಯಾಗಿದೆ. ಪಕ್ಷದ ನೀತಿಗಳು, ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಜವಾಬ್ದಾರಿ ಹೊಂದಿದೆ. ಪಕ್ಷದ ಪ್ರಮುಖ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವಿಚಾರಗಳ ಬಗ್ಗೆ ಪಕ್ಷದ ನಿಲುವನ್ನು ವ್ಯಾಖ್ಯಾನಿಸುವ ಹೊಣೆಗಾರಿಕೆಯನ್ನು ಸಮಿತಿ ಹೊಂದಿದೆ.ಸಮಿತಿಯು ಎಲ್ಲಾ ರಾಜ್ಯಗಳಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿಗಳ ನಿಯಂತ್ರಣ, ಉಸ್ತುವಾರಿ ನಿರ್ವಹಿಸುತ್ತದೆ. ಪಕ್ಷದ ಚುನಾವಣಾ ಪ್ರಚಾರದ ಜೊತೆಗೆ ರಾಷ್ಟ್ರಮಟ್ಟದ ರಾಜಕೀಯ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತ್ತದೆ. ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವನ್ನೂ ಈ ಸಮಿತಿ ಹೊಂದಿದೆ.
ದೇಶದ್ಯಾಂತ ಇರುವ ಪ್ರಮುಖ ನಾಯಕರನ್ನು ಈ ಸಮಿತಿಯಲ್ಲಿ ಸದಸ್ಯರಾಗಿಸಿದೆ.ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಸದ್ಯ 36 ಸದಸ್ಯರಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ದಿಗ್ವಿಜಯ್ ಸಿಂಗ್, ಪಿ.ಚಿದಂಬರಂ, ಅಭಿಷೇಕ್ ಮನು ಸಿಂಗ್ವಿ, ಅಂಬಿಕಾ ಸೋನಿ, ಎ.ಕೆ.ಆಂಟೋನಿ, ಭೂಪೇಶ್ ಬಾಘೇಲ್, ಗೌರವ್ ಗೊಗೋಯ್, ಜಯರಾಂ ರಮೇಶ್, ಕೆ.ಸಿ.ವೇಣುಗೋಪಾಲ್, ಮೀರಾ ಕುಮಾರ್, ಸುರ್ಜೇವಾಲ, ಸಲ್ಮಾನ್ ಖುರ್ಷಿದ್, ಶಶಿ ತರೂರ್, ಸಚಿನ್ ಪೈಲಟ್, ನಾಸೀರ್ ಹುಸ್ಸೇನ್ ಸೇರಿ ಹಿರಿಯ ಕಾಂಗ್ರೆಸ್ ನಾಯಕರು ಈ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ. ಇದೀಗ ಕಾಂಗ್ರೆಸ್ನ ಈ ಉನ್ನತ ಮಟ್ಟದ ನಿರ್ಧಾರಗಳನ್ನು ಕೈಗೊಳ್ಳುವ ಸಮಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.