ಸಿ.ಟಿ. ರವಿಯವರಿಗೆ ನೋಟೀಸ್ ನೀಡುವ ಮೂಲಕ ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕುವ ಯತ್ನ: ಯಶ್ ಪಾಲ್ ಸುವರ್ಣ
ರಾಜ್ಯ ಕಾಂಗ್ರೆಸ್ ಸರಕಾರದ ಗೃಹ ಇಲಾಖೆ ಅಲ್ಪಸಂಖ್ಯಾತರ ತುಷ್ಟೀಕರಣ ಇಲಾಖೆಯಾಗಿ ಪರಿವರ್ತನೆಯಾಗಿದ್ದು, ಮತೀಯವಾದಿ ಶಕ್ತಿಗಳ ಕೈಗೊಂಬೆಯಾಗಿ ಮಾಜಿ ಸಚಿವ ಸಿ. ಟಿ. ರವಿ ಯವರಿಗೆ ನೋಟಿಸ್ ನೀಡುವ ಮೂಲಕ ರಾಜ್ಯದ ಹಿಂದುತ್ವವಾದಿ ನಾಯಕರ ದನಿ ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ದಿನ ಬೆಳಗಾದರೆ ಆರ್ ಎಸ್ ಎಸ್ ವಿರುದ್ಧ ಹೇಳಿಕೆ ನೀಡುವುದನ್ನೇ ದಿನಚರಿಯಾಗಿ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆಯನ್ನು ಕೈಗೊಂಬೆಯನ್ನಾಗಿಸಿ ಪೊಲೀಸರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಂತೆ ಕಾಂಗ್ರೆಸ್ ಮುಖಂಡರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳು ನೀಟ್ ಪರೀಕ್ಷೆಯ ನೆಪದಲ್ಲಿ ವಿದ್ಯಾರ್ಥಿಗಳ ಮುಖವಾಡ ಧರಿಸಿ ಪ್ರತಿಭಟನೆ ನಡೆಸಿ ಉಗ್ರರ ಪರ ಜೈಕಾರ ಹಾಕುತ್ತಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ ಸಿ.ಟಿ. ರವಿ ವಿರುದ್ಧ ನೋಟೀಸ್ ನೀಡಲು ತುದಿಗಾಲಲ್ಲಿ ನಿಂತಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಡೆಗೆಟ್ಟಿದ್ದರೂ ಯಾವುದೇ ಕಠಿಣ ಕ್ರಮವಹಿಸದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತೀಯ ಶಕ್ತಿಗಳ ಓಲೈಕೆಗಾಗಿ ಮಾಜಿ ಸಚಿವರ ವಿರುದ್ಧ ನೋಟೀಸ್ ನೀಡಲು ಮುಂದಾಗಿದ್ದಾರೆ.
ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ರಾಜ್ಯ ಸರ್ಕಾರ ಹದ್ದು ಮೀರಿ ವರ್ತಿಸುತ್ತಿದ್ದು, ರಾಜ್ಯದ ರಾಷ್ಟ್ರೀಯವಾದಿ ಚಿಂತನೆಯ ಜನತೆಯ ಸಿ. ಟಿ. ರವಿ ಯವರ ಜೊತೆ ನಿಲ್ಲಲಿದ್ದು, ಇಂತಹ ಸಾವಿರ ನೋಟಿಸುಗಳಿಂದಲೂ ಬಿಜೆಪಿ ನಾಯಕರ ಹೋರಾಟದ ಮನಸ್ಥಿತಿಯನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಯಶ್ ಪಾಲ್ ಸುವರ್ಣ ಹೇಳಿದ್ದಾರೆ.