ಉಡುಪಿ: ಮಕ್ಕಳಲ್ಲಿ ಸಹಕಾರದ ಅರಿವು ಬೆಳೆಸುವ ಧ್ವಜ ಚಿತ್ರ ಬಿಡಿಸುವ ಸ್ಪರ್ಧೆ
Monday, July 13, 2026
ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯವು ಐದು ಯಶಸ್ವಿ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಉಡುಪಿಯ ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಮಕ್ಕಳಿಗಾಗಿ ಸಹಕಾರಿ ಧ್ವಜದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಉಡುಪಿಯ ಸಹಕಾರಿ ಮುಖ್ಯಕಚೇರಿಯಲ್ಲಿ ಆಯೋಜಿಸಲಾಯಿತು.
ಉದ್ಯಮಿ ಎಸ್.ಎನ್. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಚಳವಳಿಯ ಮಹತ್ವ, ಕೇಂದ್ರ ಸಹಕಾರ ಸಚಿವಾಲಯದ ಸಾಧನೆಗಳು ಹಾಗೂ ಸಹಕಾರಿ ಧ್ವಜದ ಇತಿಹಾಸ ಮತ್ತು ಅದರ ಸಂದೇಶದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷ ಆರ್.ವಿ. ಕುಂದರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಬ್ಯಾಂಕ್, ಹೆಜಮಾಡಿ ಶಾಖೆಯ ವ್ಯವಸ್ಥಾಪಕ ನಾಗರಾಜ್, ಸೊಸೈಟಿಯ ಉಪಾಧ್ಯಕ್ಷ ಪ್ರಶಾಂತ್ ಎಸ್., ಪ್ರಧಾನ ವ್ಯವಸ್ಥಾಪಕಿ ಸರಿತ, ನಿರ್ದೇಶಕರಾದ ಅಶೋಕ್ ಶೇರಿಗಾರ್ (ಅಲೆವೂರು), ಮಾಧವ ಹಾಗೂ ವಿಶ್ವನಾಥ್ ನಾಯಕ್ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಅನಾವರಣಗೊಳಿಸಿದರು. ತೀರ್ಪುಗಾರರು ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ನಾಲ್ವರು ಪ್ರಥಮ ಹಾಗೂ ನಾಲ್ವರು ದ್ವಿತೀಯ ಸ್ಥಾನ ವಿಜೇತರಿಗೆ ಬಹುಮಾನ ವಿತರಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ನೆನಪಿನ ಉಡುಗೊರೆ ನೀಡಿ ಪ್ರೋತ್ಸಾಹಿಸಲಾಯಿತು.
ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ನ ಕಲೆ ಮತ್ತು ಕರಕುಶಲ ಶಿಕ್ಷಕ ಅಂಕಿತ್ ಆರ್. ಪೂಜಾರಿ, ತುಳು ಮತ್ತು ಕನ್ನಡ ಸಾಹಿತಿ ಧರ್ಮದತ್ತ ದೆಂದೂರು, ದಯಾನಂದ ಕೆ. ಶೆಟ್ಟಿ ಹಾಗೂ ಸಾಹಿತಿ, ಪತ್ರಕರ್ತ ಮತ್ತು ಸಿನಿ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸೊಸೈಟಿಯ ವ್ಯವಸ್ಥಾಪಕಿ ದಿವ್ಯ ಸ್ವಾಗತಿಸಿದರು. ಚೈತ್ರ, ಪ್ರತೀಕ್ಷಾ ಮತ್ತು ಅಶ್ಮಿತ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ವಂದಿಸಿದರು.
.jpeg)
