ಕಡಿಯಾಳಿಯಲ್ಲಿ 42ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ
Saturday, August 22, 2026
ಉಡುಪಿಯ ಕಡಿಯಾಳಿ ಮಾತೃ ಮಂಡಳಿಯ ವತಿಯಿಂದ 42ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಕಾರ್ಯಕ್ರಮವು ಶುಕ್ರವಾರ ಕಡಿಯಾಳಿ ಶ್ರೀ ಮಹಿಷಾಮರ್ದಿನಿ ದೇವರ ಸನ್ನಿಧಿಯ ಕಾತ್ಯಾಯನಿ ಮಂಟಪದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.
ವೇದಮೂರ್ತಿ ಪಾಡಿಗಾರ ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀದೇವಿಯ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಕಳಸ ಪ್ರತಿಷ್ಠಾಪನೆ, ಸಾಮೂಹಿಕ ಕುಂಕುಮಾರ್ಚನೆ, ಮಂಡಲ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ದೋರ ಗ್ರಂಥಿಯೊಂದಿಗೆ ಪ್ರಸಾದ ವಿತರಿಸಲಾಯಿತು.
ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಶ್ರೀಶ ಭಟ್ ಎಲ್ಲೂರು ಹಾಗೂ ಅರ್ಚಕ ವೃಂದದವರು ನೆರವೇರಿಸಿದರು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನ್ಯಾಯವಾದಿ ಸುಪ್ರಸಾದ ಶೆಟ್ಟಿ, ಶೋಭಾ ಭಂಡಾರ್ಕರ್ ಹಾಗೂ ಡಾ. ಉಷಾ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾತೃ ಮಂಡಳಿಯ ಸ್ಥಾಪಕರಾದ ಸುಪ್ರಭಾ ಆಚಾರ್ಯ, ಅಧ್ಯಕ್ಷೆ ಪದ್ಮಾ ರತ್ನಾಕರ್ ಹಾಗೂ ಭಾರತಿ ಇಂದುಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತೃ ಮಂಡಳಿಯ ಸದಸ್ಯರು ಸೇರಿದಂತೆ 500ಕ್ಕೂ ಅಧಿಕ ಸುಮಂಗಲೆಯರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.