ಬೆಂಗಳೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ - ಗೌತಮ್ ಅದಾನಿ ಭೇಟಿ
ಬಹುಚರ್ಚಿತ ಉದ್ಯಮಿ ಗೌತಮ್ ಅದಾನಿ ಅವರು ಭಾನುವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ವಿವಾದಾತ್ಮಕ 16.75 ಕಿಲೋಮೀಟರ್ ಬೆಂಗಳೂರು ಸುರಂಗ ರಸ್ತೆ ಯೋಜನೆಯ ಎರಡೂ ಪ್ಯಾಕೇಜ್ಗಳಿಗೆ ಅದಾನಿ ಎಂಟರ್ಪ್ರೈಸಸ್ ಅತ್ಯಂತ ಕಡಿಮೆ ಬಿಡ್ದಾರನಾಗಿ ಹೊರಹೊಮ್ಮಿದ ಬೆನ್ನಲ್ಲೇ ಈ ಭೇಟಿ ನಡೆದಿದೆ. ಕಂಪನಿಯು 22,267 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿದ್ದು, ಇದು ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಆರಂಭಿಕ ಅಂದಾಜಿಗಿಂತ ಗಣನೀಯವಾಗಿ ಹೆಚ್ಚಾಗಿದೆ.
ಇದೊಂದು ಸೌಜನ್ಯಯುತ ಭೇಟಿ ಎಂದು ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕಾರ್ಪೊರೇಟ್ ಸಂಘಟನೆಗಳಿಗೆ ಭೂಮಿ ಹಂಚಿಕೆ ಮತ್ತು ಮಾಧ್ಯಮ ಪ್ರಭಾವ ಸೇರಿದಂತೆ ಬೆರಳೆಣಿಕೆ ಉದ್ಯಮಿಗಳಿಗೆ ಕೇಂದ್ರದ ಬಿಜೆಪಿ ಸರ್ಕಾರದ ಪಕ್ಷಪಾತದ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಿರಂತರ ಆರೋಪ ಮಾಡುತ್ತಿರುವಾಗಲೂ, ಈ ಉನ್ನತ ಮಟ್ಟದ ಭೇಟಿಯು ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ.
ಬಿಜೆಪಿ ಮುಖಂಡ ಆರ್. ಅಶೋಕ್ ಈ ಭೇಟಿಯನ್ನು ಖಂಡಿಸಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರೋಧಿಸುವುದು ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಸೌಜನ್ಯಯುತ ಭೇಟಿ ಹೆಸರಿನಲ್ಲಿ ವ್ಯವಹಾರ ಕುದುರಿಸುವುದು ಇಬ್ಬಗೆ ನೀತಿ ತೋರಿಸುತ್ತದೆ ಎಂದಿದ್ದಾರೆ.