ಶೀಂಬ್ರ ವಿನಾಯಕ ದೇವಸ್ಥಾನದ ಸ್ನಾನ ಘಟ್ಟ ಲೋಕಾರ್ಪಣೆ: ಸ್ವರ್ಣಾ ನದಿಗೆ ಬಾಗಿನ ಅರ್ಪಣೆ
ಉಡುಪಿಯ ಮೂಡು ಪೆರಂಪಳ್ಳಿ ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ 2.25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ನೂತನ ನದಿ ಸ್ನಾನ ಘಟ್ಟವನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಸ್ವರ್ಣಾ ನದಿಗೆ ಬಾಗಿನ ಸಮರ್ಪಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.
ಇತಿಹಾಸ ಪ್ರಸಿದ್ಧ ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ನದಿ ಸ್ನಾನ ಘಟ್ಟವು ಹಲವು ವರ್ಷಗಳಿಂದ ತೀವ್ರ ನದಿ ಕೊರೆತದಿಂದ ಹಾನಿಗೊಳಗಾಗಿತ್ತು. ಪ್ರತಿವರ್ಷ ಕೃಷ್ಣಾಂಗಾರಕ ಚತುರ್ದಶಿಯ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ತೀರ್ಥಸ್ನಾನಕ್ಕಾಗಿ ಆಗಮಿಸುವ ಹಿನ್ನೆಲೆಯಲ್ಲಿ ಮೂಲಸೌಕರ್ಯದ ಕೊರತೆಯಿಂದ ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮನವಿಯ ಮೇರೆಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ₹2.25 ಕೋಟಿ ಅನುದಾನ ಒದಗಿಸಿ ನೂತನ ಸ್ನಾನ ಘಟ್ಟವನ್ನು ಅಭಿವೃದ್ಧಿಪಡಿಸಲಾಗಿದೆ.
ಲೋಕಾರ್ಪಣೆ ಬಳಿಕ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ಉಡುಪಿಯ ಜೀವನಾಡಿಯಾಗಿರುವ ಸ್ವರ್ಣಾ ನದಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಪ್ರಮುಖ ಆಧಾರವಾಗಿದೆ. ಕೃಷ್ಣಾಂಗಾರಕ ಚತುರ್ದಶಿಯ ಪವಿತ್ರ ದಿನದಂದು ದೇವಸ್ಥಾನದ ವತಿಯಿಂದ ಸ್ವರ್ಣಾ ನದಿಗೆ ಬಾಗಿನ ಸಮರ್ಪಿಸಿ ನೂತನ ಸ್ನಾನ ಘಟ್ಟವನ್ನು ಭಕ್ತರ ಸೇವೆಗೆ ಅರ್ಪಿಸಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿಯೂ ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಲಾಗುವುದು ಎಂದು ಹೇಳಿದರು.
ನೂತನ ಸ್ನಾನ ಘಟ್ಟದ ನಿರ್ಮಾಣದಿಂದ ಪ್ರತಿವರ್ಷ ತೀರ್ಥಸ್ನಾನಕ್ಕಾಗಿ ಆಗಮಿಸುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ನದಿ ತೀರದ ಸುರಕ್ಷತೆ ಹಾಗೂ ಮೂಲಸೌಕರ್ಯವೂ ಮತ್ತಷ್ಟು ಸುಧಾರಣೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಅಜಿತ್ ಪೈ, ರಮೇಶ್ ರಾವ್, ಬಾಲಾಜಿ ರಾಘವೇಂದ್ರ ಆಚಾರ್ಯ, ಯುವ ಬ್ರಾಹ್ಮಣ ಪರಿಷತ್ನ ಶ್ರೀ ಚಂದ್ರಕಾಂತ ಕೆ.ಎನ್., ನಾಗರಾಜ ತಂತ್ರಿ, ಹರಿಕೃಷ್ಣ ಶಿವತ್ತಾಯ, ಪ್ರಶಾಂತ ಭಟ್ ಪೆರಂಪಳ್ಳಿ, ಅನಿಟ ಬೆಲಿಂಡಾ ಡಿಸೋಜಾ, ಮಂಜುನಾಥ ಮಣಿಪಾಲ, ಸುಮಾ, ವಿಜಯ ಪೂಜಾರಿ, ಶ್ರೀ ಗಣಪತಿ ಭಟ್, ಶ್ರೀ ವಾದಿರಾಜ ಆಚಾರ್ಯ, ಬಿಜೆಪಿ ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಶಶಾಂಕ್ ಶಿವತ್ತಾಯ, ಗೋಪಾಲಾಚಾರ್ ಸೇರಿದಂತೆ ವಿದ್ವಾಂಸರು ಹಾಗೂ ಗಣ್ಯರು ಉಪಸ್ಥಿತರಿದ್ದರು.