
Bantwala: ಹಿರಿಯ ರಂಗಭೂಮಿ ಕಲಾವಿದ ನಿಧನ; ಗಣ್ಯರ ಸಂತಾಪ
23/07/2025 05:34 AM
ತುಳು ರಂಗಭೂಮಿ ಹಿರಿಯ ಕಲಾವಿದ, ಚಲನಚಿತ್ರ ನಟ ಚಿ.ರಮೇಶ್ ಕಲ್ಲಡ್ಕ (68) ಅವರು ಹೃದಯಾಘಾತದಿಂದ ಕಲ್ಲಡ್ಕದ ಕೊಳಕೀರು ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ಕಲಾವಿದನ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
30 ವರ್ಷಕ್ಕೂ ಹೆಚ್ಚು ಕಲಾಸೇವೆ: ರಂಗಭೂಮಿಯಲ್ಲಿ 30 ವರ್ಷಕ್ಕೂ ಹೆಚ್ಚು ಕಲಾಸೇವೆಯನ್ನು ಸಲ್ಲಿಸಿರುವ ರಮೇಶ್ ಕಲ್ಲಡ್ಕ ಕಳೆದ 20 ವರ್ಷಗಳಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮದಲ್ಲಿ ಕಲಾವಿದರಾಗಿ ಕಲಾಸೇವೆ ಮಾಡುತ್ತಿದ್ದರು. ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಗರಡಿಯಲ್ಲಿ ಪಳಗಿದ ರಮೇಶ್ ಕಲ್ಲಡ್ಕ ಅವರು ಕಲಾಸಂಗಮದ ಎಲ್ಲ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ "ಶಿವದೂತಗುಳಿಗೆ" ನಾಟಕದ ಭೀಮಾರಾವ್ ಪಾತ್ರ ಅವರಿಗೆ ಹೆಸರು, ಹೊಸ ಇಮೇಜನ್ನು ತಂದು ಕೊಟ್ಟಿದೆ. ಶಿವಾಜಿ ನಾಟಕದಲ್ಲೂ ಅವರು ನಿರ್ವಹಿಸಿದ ದಾದ ಕೊಂಡೆಯ ಪಾತ್ರ ಗಮನ ಸಳೆದಿತ್ತು. ಸೌಮ್ಯ ಸ್ವಭಾವದ ರಮೇಶ್ ಕಲ್ಲಡ್ಕ ಅವರು ರಂಗಭೂಮಿಯಲ್ಲಿ ಶಿಸ್ತಿನ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಕಲಾಸಂಗಮದ ಮೂಲಕ ಮುಂಬೈ, ಬೆಂಗಳೂರು ಸಹಿತ ಬೇರೆ-ಬೇರೆ ಊರುಗಳಲ್ಲಿ ನಾಟಕ ಪ್ರದರ್ಶನ ನೀಡಿ ಜನಪ್ರಿಯತೆ ಸಂಪಾದಿಸಿದ್ದರು. 1957ರ ಏಪ್ರಿಲ್ನಲ್ಲಿ ಜನಿಸಿದ ಚಿ.ರಮೇಶ್ ಕಲ್ಲಡ್ಕ, ಶಾಂತಾರಾಮ ಕಲ್ಲಡ್ಕ ಅವರ ಮಿತ್ರ ಬಳಗ ಕಲಾತಂಡದ ಮೂಲಕ ತನ್ನ ರಂಗಪಯಣವನ್ನು ಕಿರಿ ವಯಸ್ಸಿನಲ್ಲೇ ಆರಂಭಿಸಿದ್ದರು. ಬಳಿಕ ಶಾಂತಾರಾಮ ಕಲ್ಲಡ್ಕ ಅವರ ತುಳುವಪ್ಪೆ ಜೋಕುಲು ಕಲಾಬಳಗದಲ್ಲೂ ತೊಡಗಿಸಿಕೊಂಡ ರಮೇಶ್, ತುಳು ವೃತ್ತಿ ರಂಗಭೂಮಿ ಪ್ರವೇಶಿಸಿದರು. ನಂತರ, ಕಲ್ಲಡ್ಕದಲ್ಲಿ 'ಮೈತ್ರಿ ಕಲಾವಿದರು' ತಂಡ ಸ್ಥಾಪಿಸಿ, ಕಲ್ಲಡ್ಕ ಶಾರದೋತ್ಸವದಲ್ಲಿ ತಂಡದ ನಾಟಕ ಪ್ರದರ್ಶಿಸುತ್ತಿದ್ದರು. ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮ ತಂಡದಲ್ಲಿ ಸುದೀರ್ಘ ಕಾಲ ತನ್ನ ವೃತ್ತಿ ಪಯಣ ನಡೆಸಿದ ಅವರು ಆ ತಂಡದ ಹಿರಿಯ ಹಾಗೂ ಪ್ರಮುಖ ಕಲಾವಿದರಾಗಿದ್ದರು.
ಒರಿಯರ್ದೊರಿ ಅಸಲ್, ಮದಿಮೆ ಸಹಿತ ಕೊಡಿಯಾಲ್ ಬೈಲ್ ಅವರ ಜನಪ್ರಿಯ ತುಳು ನಾಟಕಗಳಲ್ಲಿ ರಮೇಶ್ ಅವರು ಗಮನ ಸೆಳೆದಿದ್ದರೆ, ಇತ್ತೀಚಿನ ಶಿವದೂತ ಗುಳಿಗೆ, ಶಿವಾಜಿ ನಾಟಕಗಳು ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು. ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ ಅವರು ಕಲ್ಲಡ್ಕ ಪರಿಸರದ ಶಾರದೋತ್ಸವ ಸಮಿತಿ ಸಹಿತ ವಿವಿಧ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಶಾರದೋತ್ಸವ ಸಮಿತಿಯ ಸ್ಥಾಪಕ ಟ್ರಸ್ಟಿಯಾಗಿದ್ದರು. ಉತ್ತಮ ನಿರೂಪಕರಾಗಿಯೂ ಅವರು ಗುರುತಿಸಿಕೊಂಡಿದ್ದರು. 2 ದಿನಗಳ ಹಿಂದೆಯಷ್ಟೇ ನಾಟಕವೊಂದರಲ್ಲಿ ಅಭಿನಯಿಸಿ ಮನೆಗೆ ಮರಳಿದ್ದರು.