
Padubidre: ಅತೀ ವೇಗದಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ಪಾದಚಾರಿ ಮೃತ್ಯು
Friday, September 26, 2025
ಟಿಪ್ಪರ್ ಚಾಲಕನ ಅಜಾಗರೂಕತೆಯ ಚಾಲನೆಯಿಂದಾಗಿ ಬಿಹಾರ ಮೂಲದ ನವ ವಿವಾಹಿತನೋರ್ವ ದಾರುಣಾವಾಗಿ ಮೃತ ಪಟ್ಟ ಘಟನೆ ಪಡುಬಿದ್ರಿ ಕಾಮತ್ ಪೆಟ್ರೋಲ್ ಬಂಕ್ ಸಮೀಪ ಸಂಭವಿಸಿದೆ.
ಮೃತ ಯುವಕ ಬಿಹಾರ ಮೂಲದ, ಎರ್ಮಾಳಿನ ಪ್ಲೈವುಡ್ ಫ್ಯಾಕ್ಟರಿ ಉದ್ಯೋಗಿ ರಾಜಕುಮಾರ ಶರ್ಮ(23) ಎಂದು ಗುರುತಿಸಲಾಗಿದೆ. ಆರು ತಿಂಗಳ ಹಿಂದೆಯಷ್ಟೇ ಇವರಿಗೆ ಮದುವೆಯಾಗಿತ್ತು. ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಬರುತ್ತಿದ್ದ ಪಿಕಪ್ ಗೂಡ್ಸ್ ವಾಹನ ಏಕಾಏಕಿ ರಸ್ತೆಯಲ್ಲಿ ನಿಂತಿದ್ದು, ಹಿಂದಿನಿ0ದ ವೇಗವಾಗಿ ಬಂದ ಟಿಪ್ಪರ್ , ಪಿಕಪ್ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದು, ಬಳಿಕ ನಡೆದುಕೊಂಡು ಹೋಗುತ್ತಿದ್ದ ಮೂವರ ಪೈಕಿ ರಾಜಕುಮಾರ ಶರ್ಮ ಅವರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಪಕ್ಕದ ಕಟ್ಟಡದ ಗೋಡೆಗೆ ಡಿಕ್ಕಿಯಾಗಿ ನಿಂತಿದೆ. ಡಿಕ್ಕಿಯ ರಭಸಕ್ಕೆ ಕಟ್ಟಡದ ಗೋಡೆಯೂ ಕುಸಿದು ಬಿದ್ದಿದೆ. ಅಪಘಾತದಿಂದ ರಾಜಕುಮಾರ ಶರ್ಮ ತಲೆಗೆ ಗಂಭೀರ ಹೊಡೆತ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಪರಿಶೀಲನೆ ನಡೆಸಿದ್ದು, ಟಿಪ್ಪರ್ ಚಾಲಕನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.