3 ವರ್ಷದ ಮಗುವಿನೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ..!
ತನ್ನ ಮೂರು ವರ್ಷದ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಮಹಿಳೆಯೊಬ್ಬರು ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಹಾಗೂ ಅವರ ಮೂರು ವರ್ಷದ ಮಗು ಧನ್ವಿ ಮೃತರು. ಶನಿವಾರ ರಾತ್ರಿ ಮನೆಯವರೊಂದಿಗೆ ಕೆಲಸ ಕಾರ್ಯಗಳನ್ನು ಮಾಡಿ ಮಲಗಿದ್ದ ಮಧುಶ್ರೀ ಅವರು ಭಾನುವಾರ ಬೆಳಗ್ಗೆ ಮಗು ಸಹಿತ ಕಾಣದೇ ಇದ್ದಾಗ ಮನೆಯವರು ಹುಡುಕಾಡಿದ್ದಾರೆ. ಈ ವೇಳೆ ಮನೆ ಸಮೀಪದ ಕೆರೆಯಲ್ಲಿ ಮಧುಶ್ರೀ ಹಾಗೂ ಮಗುವಿನ ಮೃತದೇಹ ಪತ್ತೆಯಾಗಿದೆ. ಮಧುಶ್ರೀ ಅವರು ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ.ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದವರಾದ ಮಧುಶ್ರೀ ಅವರು ನಾಲ್ಕು ವರ್ಷದ ಹಿಂದೆ ಹರೀಶ್ ಅವರನ್ನು ವಿವಾಹ ಆಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಳ್ಳಾರೆ ಪೊಲೀಸ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧುಶ್ರೀ ಅವರು ಕೆರೆಗೆ ಹಾರುವ ಮೊದಲು ಜೊತೆಗೆ ಮಗುವಿನೊಂದಿಗೆ ಸಾಯಲು ನಿರ್ಧರಿಸಿ ತನ್ನ ಸೊಂಟಕ್ಕೆ ಮಗುವನ್ನು ಬಟ್ಟೆಯಿಂದ ಕಟ್ಟಿಕೊಂಡು ಕೆರೆಗೆ ಹಾರಿದ್ದಾರೆ. ಕೆರೆಯಲ್ಲಿ ಮೃತದೇಹ ಪತ್ತೆಯಾದಾಗ ಮಗು ತಾಯಿಯನ್ನು ಅಪ್ಪಿಕೊಂಡ ರೀತಿಯಲ್ಲೇ ಪತ್ತೆಯಾಗಿದೆ.