ಸಿಎಂ ಭರವಸೆ ಹಿನ್ನೆಲೆ; ಕೊರಗ ಸಮುದಾಯದ ಮುಷ್ಕರ ತಾತ್ಕಾಲಿಕ ಸ್ಥಗಿತ
ಕೊರಗ ಸಮುದಾಯದ ಯುವಕರಿಗೆ ನೇರ ಸರ್ಕಾರಿ ನೇಮಕಾತಿಗೆ ಆಗ್ರಹಿಸಿ ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ವತಿಯಿಂದ ಕಳೆದ 25 ದಿನಗಳಿಂದ ಆಹೋ ರಾತ್ರೋ ಧರಣಿಯನ್ನು ಹಿಂಪಡೆಯಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಭರವಸೆಯ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ.
ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಡಿಸೆಂಬರ್ 15 ರಂದು ಪ್ರಾರಂಭವಾಗಿ ಜನವರಿ 9 ರವರೆಗೆ ಮುಂದುವರಿದಿತ್ತು. ಜನವರಿ 9 ರಂದು ಪ್ರತಿಭಟನಾ ಸ್ಥಳದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡಾ ಅವರು, ಮುಂದಿನ ಮೂರು ತಿಂಗಳೊಳಗೆ ಸರ್ಕಾರ ನಮ್ಮ ಬೇಡಿಕೆಯನ್ನು ಪರಿಗಣಿಸಿ ಜಾರಿಗೆ ತರದಿದ್ದರೆ, ಒಕ್ಕೂಟವು ತೀವ್ರ ಸ್ವರೂಪದ ಹೋರಾಟವನ್ನು ಪ್ರಾರಂಭಿಸಲಿದೆ ಎಂದು ಎಚ್ಚರಿಸಿದ್ದಾರೆ.
ಕೊರಗ ಯುವಕರಿಗೆ ನೇರ ಸರ್ಕಾರಿ ಉದ್ಯೋಗವನ್ನು ಭದ್ರಪಡಿಸುವ ಗುರಿಯೊಂದಿಗೆ ನಾವು ಈ ಕಾನೂನುಬದ್ಧ ಮತ್ತು ಪ್ರಜಾಸತ್ತಾತ್ಮಕ ಹೋರಾಟವನ್ನು ನಡೆಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಇಲಾಖಾ ಅಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಭರವಸೆ ಸಿಕ್ಕಿರುವ ಹಿನ್ನೆಲೆಯಲ್ಲಿ,ನಾವು ಸದ್ಯಕ್ಕೆ ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದು ಸುಶೀಲಾ ನಾಡಾ ತಿಳಿಸಿದರು.
