-->
 ಹಿರಿಯ ಸಿವಿಲ್ ಕಂಟ್ರಾಕ್ಟರ್, ಸಮಾಜ ಸೇವಕ ಸಿರಿಲ್ ಕ್ವಾಡ್ರಸ್ ನಿಧನ

ಹಿರಿಯ ಸಿವಿಲ್ ಕಂಟ್ರಾಕ್ಟರ್, ಸಮಾಜ ಸೇವಕ ಸಿರಿಲ್ ಕ್ವಾಡ್ರಸ್ ನಿಧನ


ಶಿರ್ವದ ಹಿರಿಯ ಸಿವಿಲ್ ಕಂಟ್ರಾಕ್ಟರ್, ಸಮಾಜ ಸೇವಕ, ಶಿಕ್ಷಣಪ್ರೇಮಿ ಬಂಟಕಲ್ಲು ಬಿಸಿರೋಡ್ ನಿವಾಸಿ ಸಿರಿಲ್ ಕ್ವಾಡ್ರಸ್ (85) ಅವರು ಜ. 5 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಉದ್ಯಮಿ, ಸಿವಿಲ್ ಕಂಟ್ರಾಕ್ಟರ್ ಪ್ರದೀಪ್ ಕ್ವಾಡ್ರಸ್, ದಂತ ವೈದ್ಯ ಡಾ. ದಿಲೀಪ್ ಕ್ವಾಡ್ರಸ್ ಸೇರಿದಂತೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪಾಂಬೂರು ಹೋಲಿಕ್ರಾಸ್ ಚರ್ಚ್ ಪಾಲನಾ ಮಂಡಳಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಅವರು ಚರ್ಚ್ ನ ವಾರ್ಡ್ ಗುರಿಕಾರರಾಗಿಯೂ ಸೇವೆ ಸಲ್ಲಿಸಿದ್ದರು. ಬಂಟಕಲ್ಲು ಲಯನ್ಸ್ ಕ್ಲಬ್ಬಿನ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಕೊಡುಗೈ ದಾನಿಯಾಗಿದ್ದರು.

ಅಬುಧಾಬಿಯ ಬ್ರಿಟೀಷ್ ಬ್ಯಾಂಕ್ ಆಫ್ ಮಿಡ್ಸ್ ಈಸ್ಟ್ ಬ್ಯಾಂಕ್ನಲ್ಲಿ ಸೇವೆಯಲ್ಲಿದ್ದ ಅವರು 1989ರಲ್ಲಿ ತಂದೆಯ ನಿಧನದ ಬಳಿಕ ಹುಟ್ಟೂರಲ್ಲಿ ನೆಲೆಸಿ ಹೆಸರಾಂತ ಸಿವಿಲ್ ಕಂಟ್ರಾಕ್ಟರ್ ಆಗಿ ಗುರುತಿಸಿಕೊಂಡಿದ್ದರು. ಅವರು ಅಗರ್ತಲಾ, ಬೀದರ್, ಬೆಂಗಳೂರು, ಉತ್ತರಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವಾರು ಚರ್ಚು, ಮಸೀದಿ, ದೇವಸ್ಥಾನ, ಶಾಲೆ, ಕಾಲೇಜುಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಸಭಾಂಗಣಗಳನ್ನು ನಿರ್ಮಿಸಿದ್ದು, ಕರ್ನಾಟಕ ಸರಕಾರದಿಂದ ಉಡುಪಿ ಜಿಲ್ಲೆಯ ಅತ್ಯುತ್ತಮ ಕಂಟ್ರಾಕ್ಟರ್ ಪ್ರಶಸ್ತಿಯನ್ನು ಪಡೆದಿದ್ದರು.

ಪಡುಬೆಳ್ಳಿ ಶ್ರೀ ನಾರಾಯಣ ಗುರು ಪ್ರೌಢ ಶಾಲೆ ಮತ್ತು ಪಾಂಬೂರು ಮಾನಸ ತರಬೇತಿ ಮತ್ತು ಪುನರ್ವಸತಿ ಕೇಂದ್ರದ ಸ್ಥಾಪನೆಗೆ ಶ್ರಮಿಸಿದ್ದ ಅವರನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದ್ದವು.


Ads on article

Advertise in articles 1

advertising articles 2

Advertise under the article