ನಿಟ್ಟೆ ಶಿಕ್ಷಣ ಸಂಸ್ಥೆ ಸಂಸ್ಥಾಪಕ ದಿ. ಡಾ.ವಿನಯ್ ಹೆಗ್ಡೆ ಶ್ರದ್ಧಾಂಜಲಿ ಸಭೆ
ಶಿಕ್ಷಣ, ಆರೋಗ್ಯ, ಧಾರ್ಮಿಕ, ಉದ್ಯಮ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿರುವ ಡಾ. ಎನ್. ವಿನಯ್ ಹೆಗ್ಡೆ ಅವರು ವಿಶೇಷವಾಗಿ ಕ್ರೀಡಾ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಹೇಳಿದರು.
ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಇವರು ಆಯೋಜಿಸಿದ ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಎನ್. ವಿನಯ್ ಹೆಗ್ಡೆ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಆಯೋಜಿಸುತ್ತಿದ್ದ ಪಂದ್ಯಾಟಗಳಿಗೆ ನಿಟ್ಟೆ ಡಾ. ಎನ್. ವಿನಯ್ ಹೆಗ್ಡೆ ಅವರ ಕೊಡುಗೆ ಅಪಾರವಾದದ್ದು, ಉಡುಪಿಯಲ್ಲಿ ನಡೆದ ಎಲ್ಲಾ ಸ್ಪೋರ್ಟ್ಸ್ ಮತ್ತು ಅಥ್ಲೆಟಿಕ್ಸ್ ಮೀಟ್ ಗಳಲ್ಲಿ ಅವರು ತನು ಮನ ಧನದ ಸಹಕಾರವನ್ನು ನೀಡಿದ್ದಾರೆ. ಅಲ್ಲದೆ ಉಡುಪಿ ಜಿಲ್ಲೆ 25 ಪೂರೈಸಿದ ಸಂದರ್ಭದಲ್ಲಿ ನಡೆದ 25ನೇ ವರ್ಷಾಚರಣೆಯ ಕಾರ್ಯಕ್ರಮಕ್ಕೆ ದೊಡ್ಡಮಟ್ಟದ ನೆರವನ್ನು ನೀಡಿ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲು ವಿನಯ್ ಹೆಗ್ಡೆ ಅವರ ಕೊಡುಗೆ ತುಂಬಾ ಇದೆ. ಹಾಗಾಗಿ ವಿನಯ್ ಹೆಗ್ಡೆಯವರ ನೆನಪು ಶಾಶ್ವತವಾಗಿರುವಂತಹ ಕೆಲಸಗಳನ್ನು ಉಡುಪಿಯಲ್ಲಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ಜಿಲ್ಲಾ ಅಮೆಚೂರು ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.