ಕೆಥೋಲಿಕ್ ಕೋ ಆಪರೇಟಿವ್ ಸೊಸೈಟಿ ಶಿರ್ವ ಶಾಖೆ ವತಿಯಿಂದ 'ಗ್ರಾಹಕರ ಸಹ ಮಿಲನ'
ಗ್ರಾಹಕರ ಅಭಿಪ್ರಾಯಗಳು, ಸಲಹೆ-ಸೂಚನೆಗಳನ್ನು ಪ್ರಾಮಾಣಿಕ ರೀತಿಯಲ್ಲಿ ಸ್ವೀಕರಿಸಿ ಅದನ್ನು ಉತ್ತಮ ರೀತಿಯಲ್ಲಿ ಕಾರ್ಯರೂಪಕ್ಕೆ ತಂದರೆ ಸಂಸ್ಥೆಗಳು ಉನ್ನತ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಒಂದು ಉತ್ತಮ ಹೆಜ್ಜೆಯನ್ನಿಟ್ಟಿದೆ. ಸದಸ್ಯರೆಲ್ಲರ ಸಹಕಾರದಿಂದಲೇ ಸಂಸ್ಥೆಯು ಉತ್ತಮ ರೀತಿಯಲ್ಲಿ ಮುನ್ನಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಪಾಂಬೂರು ಪ್ರಕಾಶ್ ಕನ್ಸಲ್ಟೆನ್ಸಿ ಮಾಲಕ ಪ್ರಕಾಶ್ ನೊರೋನ್ಹಾ ಅವರು ಹೇಳಿದರು.
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶಿರ್ವ ಶಾಖೆ ವತಿಯಿಂದ ಶಿರ್ವ ಹಳೆ ಚರ್ಚ್ ಬಳಿ ಇರುವ ಜಾಯೋ ವಿಲೆಜ್ ಗ್ರೀನ್ಸ್ ನಲ್ಲಿ ನಡೆದ 'ಹೊಸ ವರ್ಷದ ಸಂಭ್ರಮ ಮತ್ತು ಗ್ರಾಹಕರ ಸಹ ಮಿಲನ' ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನ್ಯಾಯವಾದಿ ವಿಲ್ಸನ್ ಹೆಚ್. ರೊಡ್ರಿಗಸ್ ಸಹಕಾರ ಕ್ಷೇತ್ರದ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಶಿರ್ವ ಶ್ರೀಲಕ್ಷ್ಮೀ ಜ್ಯುವೆಲ್ಲರ್ ಮಾಲಕ ಬಿ. ರಘುಪತಿ ಐತಾಳ್ ಅವರು ಸಂಸ್ಥೆಯ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಲೂವಿಸ್ ಲೋಬೊ ಅವರು ಪ್ರಸ್ತುತ ಕಾಲಘಟ್ಟಲ್ಲಿ ಗ್ರಾಹಕ ಸಹ-ಮಿಲನದ ಉಪಯುಕ್ತತೆ ಬಗ್ಗೆ ಸವಿವರವಾದ ಮಾಹಿತಿಯನ್ನು ಸಭೆಗೆ ನೀಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಎ. ಫೆರ್ನಾಂಡಿಸ್ರವರು 28 ವರ್ಷಗಳಿಂದ ಸಂಘವು ನಡೆದು ಬಂದ ಹಾದಿ ಹಾಗೂ ಸಂಘದ ಬೆಳವಣಿಗೆಗಾಗಿ ಮುಂದಿನ ಯೋಜನೆಗಳ ಬಗ್ಗೆ ಸಭೆಗೆ ತಿಳಿಸಿದರು.
ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ, ಹೊಸ ವರ್ಷದ ಸಂಭ್ರಮವನ್ನು ಕೇಕ್ ಕತ್ತರಿಸಿ, ಎಲ್ಲರಿಗೂ ಹಂಚುವ ಮೂಲಕ ಆಚರಿಸಲಾಯಿತು. ಶಾಖೆಯ ಅಭಿವೃದ್ಧಿಯಲ್ಲಿ ಸದಸ್ಯರ, ಗ್ರಾಹಕರುಗಳ ಅಭಿಪ್ರಾಯ ಮತ್ತು ಸಲಹೆಗಳನ್ನು ಮುಕ್ತವಾಗಿ ಸ್ವೀಕರಿಸಿ ಉತ್ತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಶ್ರೀ ಮ್ಯಾಕ್ಸಿಂ ಡಿ'ಸೋಜ, ಶ್ರೀಮತಿ ಲಾಯ್ಸೆಟ್ ಜೆ. ಕರ್ನೇಲಿಯೋ, ಶ್ರೀಮತಿ ಜೆನೆವೀವ್ ಮರಿಯ ಮಿನೇಜಸ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಜೇಮ್ಸ್ ಡಿ'ಸೋಜ ಸ್ವಾಗತಿಸಿ, ನಿರ್ದೇಶಕರು ಹಾಗೂ ಶಿರ್ವ ಶಾಖೆಯ ಮೇಲ್ವಿಚಾರಕರಾದ ವಿಲಿಯಂ ಬಿ. ಮಚಾದೋ ವಂದಿಸಿದರು. ಶಿರ್ವ ಶಾಖಾ ವ್ಯವಸ್ಥಾಪಕಿ ಶೀತಲ್ ಮರಿಯ ಡಿ'ಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.
