ಮನೆ ಮಹಡಿಯಿಂದ ಕೆಳಗೆ ಬಿದ್ದು ಯುವಕ ಸಾವು
ಮನೆಯ ಮಹಡಿಯಿಂದ ಕೆಳಕ್ಕೆ ಬಿದ್ದು ಯುವಕನೋರ್ವ ಸಾವನಪ್ಪಿದ ಘಟನೆ ಬಂಟ್ವಾಳ ತಾಲೂಕು ಮೂಡನಡುಗೋಡು ಗ್ರಾಮದ ನಡುದಂಡೆ ಮನೆ ಎಂಬಲ್ಲಿ ನಡೆದಿದೆ.
ಮೃತರನ್ನು ಚಂದ್ರ ಪೂಜಾರಿ ಎಂಬವರ ಪುತ್ರ ಪ್ರವೀಣ (26) ಎಂದು ಗುರುತಿಸಲಾಗಿದೆ. ಪ್ರವೀಣ ಪ್ರತಿ ನಿತ್ಯ ತನ್ನ ಅಣ್ಣ ಪ್ರಸಾದ್ ಜೊತೆ ರಾತ್ರಿ ಊಟದ ಬಳಿಕ ಮನೆಯ ಮಹಡಿಯ ಮೇಲೆ ಹೋಗಿ ಮಾತುಕತೆ ನಡೆಸಿ ಬರುತ್ತಿದ್ದರು. ಎಂದಿನOತೆ ಮಂಗಳವಾರ ರಾತ್ರಿ ಇಬ್ಬರೂ ಮಾತುಕತೆ ನಡೆಸಲು ಅವರ ಮನೆಯ ಮಹಡಿ ಮೇಲೆ ರಾತ್ರಿ 9 ಗಂಟೆ ಸುಮಾರಿಗೆ ಹೋಗಿ ಮಾತು ಕತೆ ನಡೆಸಿದ್ದು, ಪ್ರಸಾದ್ ಅವರು ಕೆಳಗಡೆ ಬಂದಿದ್ದರು. ಪ್ರವೀಣ್ ತಮ್ಮ ಮೊಬೈಲ್ನಲ್ಲಿ 10 ಗಂಟೆವರೆಗೂ ಮಾತನಾಡುತ್ತಿದ್ದರು
ಪ್ರಸಾದ್ ಮನೆಯೊಳಗೆ ಬಂದ ನಂತರ ಸುಮಾರು 10.10 ರ ಸುಮಾರಿಗೆ ಮನೆಯ ಮೇಲಿಂದ ಏನೋ ಬಿದ್ದ ಹಾಗೆ ಜೋರಾಗಿ ಶಬ್ದ ಕೇಳಿಸಿದ್ದು,ಆಗ ಪ್ರಸಾದ್ ಮತ್ತು ಅವರ ತಾಯಿ, ತಂಗಿ ತತ್ಕ್ಷಣ ಮನೆಯ ಹೋರಗೆ ಹೋಗಿ ನೋಡಿದಾಗ ಪ್ರವೀಣ್ ಕೆಳಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಕರ್ತವ್ಯ ನಿರತ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.