-->
 ಮಂಜನಾಡಿ ಗುಡ್ಡ ಕುಸಿತ ಪ್ರಕರಣ; ಮಾನವ ಹಕ್ಕುಗಳ ಆಯೋಗದೆದುರು ಕಣ್ಣೀರಿಟ್ಟ ಸಂತ್ರಸ್ತೆ

ಮಂಜನಾಡಿ ಗುಡ್ಡ ಕುಸಿತ ಪ್ರಕರಣ; ಮಾನವ ಹಕ್ಕುಗಳ ಆಯೋಗದೆದುರು ಕಣ್ಣೀರಿಟ್ಟ ಸಂತ್ರಸ್ತೆ


ಮಂಜನಾಡಿಯ ಮೊಂಟೆಪದವು ಎಂಬಲ್ಲಿ 2025ರ ಮೇ 30ರಂದು ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಸಿಲುಕಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಎಂಬವರು ಮಾನವ ಹಕ್ಕುಗಳ ಆಯೋಗದೆದುರು ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಶ್ಯಾಂ ಭಟ್ ಮತ್ತು ಸದಸ್ಯರಾದ ಎಸ್.ಕೆ. ವಂಟಿಗೋಡಿ ಅವರು ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಸಾರ್ವಜನಿಕ ದೂರುಗಳ ವಿಚಾರಣೆಯನ್ನು ಹಮ್ಮಿಕೊಂಡಿದ್ದರು. ಇದಕ್ಕಾಗಿ ತಾಯಿ ಜೊತೆ ಖಾಸಗಿ ಆಂಬುಲೆನ್ಸ್ ನಲ್ಲಿ ಆಗಮಿಸಿದ್ದ ಅಶ್ವಿನಿಯವರು ಆಂಬುಲೆನ್ಸ್ ನಿಂದ ವೀಲ್ ಚೇರ್ನಲ್ಲಿ ಕೂತು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರನ್ನು ಜಿ.ಪಂ. ಸಭಾಂಗಣ ಪ್ರವೇಶ ದ್ವಾರದಲ್ಲಿಯೇ ತಡೆದು ತಮ್ಮ ಅಳಲು ತೋಡಿಕೊಂಡರು. ಅಶ್ವಿನಿ ಪರವಾಗಿ ಪ್ರಕರಣದ ಕುರಿತಂತೆ ಸಾಮಾಜಿಕ ಕಾರ್ಯಕರ್ತ ರವಿ ಎಂಬವರು ಆಯೋಗದ ಪ್ರತಿನಿಧಿಗಳಿಗೆ ವಿವರ ನೀಡಿದರು.

ಮಂಜನಾಡಿ ಗ್ರಾಮದ ಮೊಂಟೆಪದವಿನ ಪಂಬದ ಹಿತ್ತಿಲು ಕೋಡಿ ಕೊಪ್ಪಳ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ಅಶ್ವಿನಿಯವರ ಇಬ್ಬರು ಪುಟ್ಟ ಮಕ್ಕಳು ಮತ್ತು ಅತ್ತೆ ಸ್ಥಳದಲ್ಲೇ ಮೃತಪಟ್ಟಿದ್ದರು. ಮನೆಯ ಮೇಲಿನ ಬೃಹತ್ ಗುಡ್ಡ ಕುಸಿದ ಪರಿಣಾಮವಾಗಿ ಉಂಟಾದ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನಿ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಮನೆಯ ಹಿಂದಿನ ಗುಡ್ಡದಲ್ಲಿ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಈ ದುರ್ಘಟನೆ ಸಂಭವಿಸಿ ಕುಟುಂಬದ ಮೂವರ ಪ್ರಾಣ ಹಾನಿಯ ಜತೆಗೆ ಅಶ್ವಿನಿಯವರು ಜೀವನ ಪರ್ಯಂತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಕಾಲು ಕಳೆದುಕೊಂಡಿದ್ದಕ್ಕೆ ಅಶ್ವಿನಿಯವರಿಗೆ ಸರಕಾರದಿಂದ 2 ಲಕ್ಷ ರೂ. ಪರಿಹಾರ ಲಭಿಸಿದೆ. ಆದರೆ ಅದು ನಿರ್ಲಕ್ಷ್ಯದಿಂದ ಸಂಭವಿಸಿದ ದುರ್ಘಟನೆ ಆದ ಕಾರಣ ಸಂತ್ರಸ್ತೆಗೆ ಜೀವನ ಪರ್ಯಂತ ಸೂಕ್ತ ಪರಿಹಾರ, ಮನೆಯ ವ್ಯವಸ್ಥೆ ಮಾಡಬೇಕೆಂದು ಈಗಾಗಲೇ ಮಾನವ ಹಕ್ಕು ಆಯೋಗ ಸೇರಿದಂತೆ ಸಂಬOಧಪಟ್ಟವರಿಗೆ ದೂರು ನೀಡಲಾಗಿದೆ. ಪ್ರಕರಣದಲ್ಲಿ ಮನೆಯನ್ನೂ ಕಳೆದುಕೊಂಡಿರುವ ಕುಟುಂಬಕ್ಕೆ ಇನ್ನೂ ಯಾವುದೇ ವ್ಯವಸ್ಥೆ ಆಗಿಲ್ಲ. ಕುಟುಂಬಕ್ಕೆ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಆಯೋಗಕ್ಕೆ ಮನವರಿಕೆ ಮಾಡಿದರು.

ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಆಯೋಗದ ಅಧ್ಯಕ್ಷ ಡಾ.ಶ್ಯಾಂ ಭಟ್, ಅಧಿಕಾರಿಗಳು ತಿಳಿಸಿರುವಂತೆ ಎನ್‌ಐಟಿಕೆಯಿಂದ ಈ ಬಗ್ಗೆ ಸಲ್ಲಿಸಲಾಗುವ ವರದಿ ಆಧಾರದಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಸಾರ್ವಜನಿಕ ದೂರು ವಿಚಾರಣೆ ವೇಳೆ ಈ ಪ್ರಕರಣದ ಕಡತದ ಪರಿಶೀಲನೆಯ ಸಂದರ್ಭ ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಪ್ರತಿಕ್ರಿಯಿಸಿ, ಇದೊಂದು ಗಂಭೀರ ಪ್ರಕರಣ, ಈ ಬಗ್ಗೆ ಎಸ್‌ಐಟಿಕೆ ವರದಿ ಬಂದ ಮೇಲೆ ಮುಂದಿನ ಕ್ರಮ ವಹಿಸಲಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಾಡೆ, ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ, ಮಂಗಳೂರು ಸಹಾಯಕ ಆಯುಕ್ತರಾದ ಮೀನಾಕ್ಷಿ ಉಪಸ್ಥಿತರಿದ್ದರು.






 


Ads on article

Advertise in articles 1

advertising articles 2

Advertise under the article