ಕಾಂಗ್ರೆಸ್ ಜಾರಿಗೊಳಿಸಿದ ಯೋಜನೆಗಳ ಹೆಸರ ಬದಲಾಯಿಸಿದ್ದೇ ಬಿಜೆಪಿ ಸಾಧನೆ- ಪುಷ್ಪಾ ಅಮರನಾಥ್
ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಯೋಜನೆಗಳ ಹೆಸರನ್ನು ಬದಲಾವಣೆ ಮಾಡಿರುವುದೇ ಬಿಜೆಪಿಯ ಸಾಧನೆ ಎಂದು ಪುಷ್ಪಾ ಅಮರನಾಥ್ ಟೀಕಿಸಿದರು.
ಫೆ. 9ರಂದು ಸುಳ್ಯದಿಂದ ಆರಂಭವಾದ 'ಮನರೇಗಾ ಬಚಾವೋ ಸಂಗ್ರಾಮ್' ಪಾದಯಾತ್ರೆಯ ಎರಡನೇ ದಿನದ ಬಹಿರಂಗ ಸಭೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೆಟ್ಲಮುಡ್ನೂರು ಗ್ರಾಮದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರವು ಜನಪರವಾದ ಯಾವುದೇ ಹೊಸ ಯೋಜನೆ ನೀಡದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾದ ಅಭಿವೃದ್ಧಿ ಯೋಜನೆಗಳ ಹೆಸರು ಬದಲಾವಣೆ ಮಾಡಿ ಜನರನ್ನು ವಂಚಿಸುತ್ತಿದೆ ಎಂದು ಅವರು ಆರೋಪಿಸಿದರು.
ಮನರೇಗಾ ಯೋಜನೆ ದೇಶದ ಕೋಟ್ಯಂತರ ಬಡವರಿಗೆ ನೆರವಾಗಿದ್ದು, ಮಾತ್ರವಲ್ಲದೆ ಕೊರೋನಾ ಸಂದರ್ಭದಲ್ಲಿ ವರದಾನವಾಗಿ ಪರಿಣಮಿಸಿತ್ತು ಎಂದರು.
ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಒಬ್ಬರೂ ಪಾಲ್ಗೊಳ್ಳದ ಬಿಜೆಪಿ ಸಂಘಪರಿವಾರದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಒಪ್ಪುವುದಿಲ್ಲ. ಅವರ ಹೆಸರನ್ನು ಅಳಿಸುವ ಷಡ್ಯಂತ್ರದ ಭಾಗವಾಗಿ ಯೋಜನೆಯ ಹೆಸರು ಬದಲಾವಣೆ ಮಾಡಲಾಗಿದೆ ಎಂದು ಅವರು ದೂರಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯತ್ ಮಟ್ಟದಲ್ಲೇ ಉದ್ಯೋಗ ಲಭ್ಯವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಪಂಚಾಯತ್ ವ್ಯವಸ್ಥೆಯ ಮೂಲ ವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಕೇಂದ್ರದ ಈ ನಿರ್ಧಾರದ ವಿರುದ್ಧ ಪಕ್ಷಾತೀತವಾಗಿ ದೇಶಾದ್ಯಂತ ಹೋರಾಟ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು. ಬಡವರ ಪರ ಕಾಂಗ್ರೆಸ್; ಗಾಂಧೀಜಿ ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಗಾಂಧೀಜಿ ಎಂಬುದನ್ನು ಕಾಂಗ್ರೆಸ್ ಸಾಬೀತುಪಡಿಸಿದೆ ಎಂದು ಪುಷ್ಪಾ ಅಮರನಾಥ್ ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆಟ್ಲಮುಡ್ನೂರು ಗ್ರಾಮದ ಕುಕ್ಕರಬೆಟ್ಟುವಿನಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು.
ಮಾಜಿ ಸಚಿವ ಬಿ. ರಮಾನಾಥ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಎಂಎಲ್ಸಿ ಐವನ್ ಡಿಸೋಜಾ, ಪುತ್ತೂರು ಶಾಸಕ ಅಶೋಕ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಸದಸ್ಯರಾದ ಪಿಯೂಷ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಬೆ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಪೆರ್ಲಾಪು, ಪಕ್ಷದ ಪ್ರಮುಖರಾದ ಅಶ್ವಿನಿ ಕುಮಾರ್ ರೈ, ಪದ್ಮಶೇಖರ್ ಜೈನ್, ಜೋಕಿಂ ಡಿಸೋಜಾ, ಟಿ.ಎಂ. ಶಹೀದ್, ಕೆ.ಕೆ. ಸಾಹುಲ್ ಹಮೀದ್, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಬಾಲಕೃಷ್ಣ ಅಂಚನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕುಶಲ ಎಂ. ಪೆರಾಜೆ, ಇಬ್ರಾಹಿಂ ನವಾಝ್, ಸುಭಾಶ್ಚಂದ್ರ ಶೆಟ್ಟಿ, ಸುರೇಶ್ ಜೋರ, ಕೆ. ಪದ್ಮನಾಭ ರೈ, ಪದ್ಮನಾಭ ಪೂಜಾರಿ ಅಳಿಕೆ, ಅನಿತಾ ಹೇಮನಾಥ ಶೆಟ್ಟಿ, ಉಷಾ ಅಂಚನ್, ಅಪ್ಪಿ, ಶಾಲೆಟ್ ಪಿಂಟೋ, ಜಯಂತಿ ಪೂಜಾರಿ, ಸಮಿತಾ ಡಿ. ಪೂಜಾರಿ, ಸತೀಶ್ ಪೂಜಾರಿ ಕೊಪ್ಪರಿಗೆ, ಕೃಷ್ಣ ಪ್ರಸಾದ್ ಆಳ್ವ, ಯು.ಟಿ. ತೌಸೀಪ್, ನಿಹಾಲ್ ಪಿ. ಶೆಟ್ಟಿ, ಅನ್ವರ್ ಖಾಸಿಂ ಸೇರಿದಂತೆ ಹಲವಾರು ಪ್ರಮುಖರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿ, ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಲತೀಫ್ ವಂದಿಸಿದರು. ಮಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

