ಉಡುಪಿ ಜಿಲ್ಲಾಸ್ಪತ್ರೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷರ ಭೇಟಿ
Friday, February 20, 2026
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಹಾಗೂ ಸದಸ್ಯ ಎಸ್.ಕೆ. ವಂಟಿಗೋಡಿ ಅವರು ಉಡುಪಿ ನಗರದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಬುಧವಾರ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ನೋಂದಣಿ ಕೇಂದ್ರ, ರೋಗಿಗಳ ವಾರ್ಡ್, ತೀವ್ರ ನಿಗಾ ಘಟಕ, ಔಷಧಿ ಉಗ್ರಾಣ ಹಾಗೂ ಸ್ವಚ್ಛತೆ ಕುರಿತು ವೀಕ್ಷಣೆ ನಡೆಸಿದ ಅವರು, ರೋಗಿಗಳ ನೋಂದಣಿಗೆ ಸರದಿ ಸಾಲು ಹೆಚ್ಚಿರುವುದನ್ನು ಗಮನಿಸಿ ಹೆಚ್ಚಿನ ನೋಂದಣಿ ಕೌಂಟರ್ಗಳನ್ನು ತೆರೆಯಲು ಜಿಲ್ಲಾ ಸರ್ಜನ್ರಿಗೆ ಸೂಚಿಸಿದರು.
ಆಸ್ಪತ್ರೆಯ ಒಳ ಕಾರಿಡಾರ್ಗಳಲ್ಲಿ ಬೆಳಕಿನ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಹೆಚ್ಚುವರಿ ಲೈಟ್ಗಳನ್ನು ಅಳವಡಿಸಲು ಹಾಗೂ ಔಷಧಿಗಳನ್ನು ಕಾರಿಡಾರ್ನಲ್ಲಿ ಇಡದೆ ಸರಿಯಾದ ಉಗ್ರಾಣದಲ್ಲಿ ಸಂಗ್ರಹಿಸಿ ಅವಧಿ ಮುನ್ನವೇ ರೋಗಿಗಳಿಗೆ ವಿತರಿಸುವಂತೆ ಸಲಹೆ ನೀಡಿದರು.
ಅಲ್ಲದೆ, ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ಕಟ್ಟಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಅಗತ್ಯ ಸಿಬ್ಬಂದಿ ಹಾಗೂ ಹೆಚ್ಚುವರಿ ಸೌಲಭ್ಯಗಳಿಗಾಗಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ. ಅಶೋಕ್, ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ವಾರ್ತಾಧಿಕಾರಿ ಮಂಜುನಾಥ್ ಬಿ. ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
