ಬಾರಕೂರು ನಾಗರಮಠ ಸೀತಾ ನದಿಯಲ್ಲಿ ಮರಳುಗಾರಿಕೆ ಸ್ಥಗಿತಕ್ಕೆ ಗ್ರಾಮಸ್ಥರ ಮನವಿ
Saturday, February 07, 2026
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಕೂರು ಸಮೀಪದ ಹೊಸಾಳ ಗ್ರಾಮದ ನಾಗರಮಠದ ಸೀತಾ ನದಿಯಲ್ಲಿ ನಡೆಯುತ್ತಿರುವ ಮರಳುಗಾರಿಕೆಯನ್ನು ತಕ್ಷಣ ನಿಲ್ಲಿಸಿ ಕೃಷಿಭೂಮಿಯನ್ನು ರಕ್ಷಿಸಬೇಕು ಎಂದು ಗ್ರಾಮಸ್ಥರು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಿದರು.
ಮರಳುಗಾರಿಕೆಯಿಂದ ನದಿ ಅಗಲ ಹೆಚ್ಚಾಗಿ ಹಲವು ಕೃಷಿಭೂಮಿಗಳು ಮಣ್ಣಿನ ಸವೆತಕ್ಕೆ ಒಳಗಾಗಿ ನದಿಗೆ ಕೊಚ್ಚಿಕೊಂಡು ಹೋಗಿವೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಪ್ರದೇಶ ಕೃಷಿಭೂಮಿಯಿಂದ ಕೂಡಿರುವುದರಿಂದ ಮರಳುಗಾರಿಕೆಗೆ ಸೂಕ್ತವಲ್ಲ ಎಂದು ಅವರು ತಿಳಿಸಿದ್ದಾರೆ.
ಅವೈಜ್ಞಾನಿಕ ಮರಳುಗಾರಿಕೆಯಿಂದ ನದಿ ದಿಕ್ಕು ಬದಲಾಗುತ್ತಿದ್ದು, ರೈತರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಜೊತೆಗೆ ನಾಗರಮಠ ಅಣೆಕಟ್ಟಿನ ಸಿಹಿನೀರು ಉಪ್ಪುನೀರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಆದ್ದರಿಂದ ಮರಳುಗಾರಿಕೆಗೆ ನೀಡಿರುವ ಅನುಮತಿಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.