ಮಂಗಳೂರಿನಲ್ಲಿ ರಾಜ್ಯಮಟ್ಟದ ಬಿಲಿಯರ್ಡ್ಸ್, ಸ್ನೂಕರ್ ಸಮರಕ್ಕೆ ಚಾಲನೆ
ಬಂದರು ನಗರಿಯ ಹೆಮ್ಮೆಯ ಸಂಕೇತ ಹಾಗೂ ಬ್ರಿಟಿಷರ ಕಾಲದಿಂದಲೂ ಕ್ರೀಡಾಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವ ಮಂಗಳೂರಿನ ಕಾಸ್ಮೊಪೊಲಿಟನ್ ಕ್ಲಬ್ಗೆ ಈಗ 125 ವರ್ಷಗಳ ಸಂಭ್ರಮ. ಈ ಐತಿಹಾಸಿಕ ಮೈಲಿಗಲ್ಲಿನ ನೆನಪಿಗಾಗಿ ಕ್ಲಬ್ ನ ವತಿಯಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಆಹ್ವಾನಿತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ಶಿಪ್ ಗೆ ಬಾವುಟಗುಡ್ಡದ ಕ್ಲಬ್ ಆವರಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಲಬ್ ಅಧ್ಯಕ್ಷರಾದ ಎ. ಸದಾನಂದ ಶೆಟ್ಟಿ ಅವರು, 1901ರಲ್ಲಿ ಸ್ಥಾಪನೆಯಾದ ಈ ಕ್ಲಬ್ ಕೇವಲ ಒಂದು ಕಟ್ಟಡವಲ್ಲ, ಇದು ಮಂಗಳೂರಿನ ಸಾಮಾಜಿಕ ಮತ್ತು ಕ್ರೀಡಾ ಇತಿಹಾಸದ ಜೀವಂತ ಸಾಕ್ಷಿ. 125 ವರ್ಷಗಳನ್ನು ಪೂರೈಸುವುದು ಸಣ್ಣ ಮಾತಲ್ಲ. ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕ್ಲಬ್ ಸೇವೆ ಸಲ್ಲಿಸುತ್ತಾ ಬಂದಿದೆ. ಈ ಬಾರಿ ಆಯೋಜಿಸಿರುವ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಪಂದ್ಯಾವಳಿಯು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.
ಪಂದ್ಯಾವಳಿಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದ ಟೂರ್ನಮೆಂಟ್ ಚೇರ್ಮನ್ ಹಾಗೂ ಉಪಾಧ್ಯಕ್ಷರಾದ ರಾಜಗೋಪಾಲ್ ರೈ ಅವರು, ನಮ್ಮ ಕ್ಲಬ್ ಬ್ರಿಟಿಷರ ಕಾಲದಿಂದಲೂ ಬೆಳೆದು ಬಂದಿದ್ದು, ಇಲ್ಲಿನ ಬಿಲಿಯರ್ಡ್ಸ್ ಟೇಬಲ್ ಗಳು ಕೂಡ ಶತಮಾನದ ಇತಿಹಾಸ ಹೊಂದಿವೆ. ಈ ಮಣ್ಣಿನಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಹೊರಹೊಮ್ಮಿದ್ದಾರೆ. ಈ ಬಾರಿ ರಾಜ್ಯದಾದ್ಯಂತ ಇರುವ ಪ್ರತಿಭಾವಂತ ಆಟಗಾರರನ್ನು ಆಹ್ವಾನಿಸಿ ಈ ಸಮರವನ್ನು ಆಯೋಜಿಸಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ಇಷ್ಟು ದೊಡ್ಡ ಮಟ್ಟದ ಸ್ನೂಕರ್ ಕ್ರೀಡಾಕೂಟ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಈ ಬಾರಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಹೆಸರಾಂತ 14 ಮಂದಿ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಪ್ರಥಮವಾಗಿ ಈ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ನುಡಿದರು.
ರಾಜ್ಯದ ನಂಬರ್ 1 ಆಟಗಾರರಾದ ಶಾನ್ ಡೇವಿಸ್ ಮಾತನಾಡಿ, ಇಂತಹ ಐತಿಹಾಸಿಕ ಕ್ಲಬ್ ನಲ್ಲಿ ಆಟವಾಡುವುದು ನಮಗೆ ಸಿಕ್ಕ ಗೌರವ. ಸ್ನೂಕರ್ನಂತಹ ಕ್ರೀಡೆಗಳಿಗೆ ಪ್ರಾಯೋಜಕತ್ವದ ಕೊರತೆ ಇರುತ್ತದೆ, ಆದರೆ ಕಾಸ್ಮೊಪೊಲಿಟನ್ ಕ್ಲಬ್ನಂತಹ ಸಂಸ್ಥೆಗಳು 125ನೇ ವರ್ಷದ ಸಂಭ್ರಮದಲ್ಲಿ ಇಂತಹ ಪಂದ್ಯಾವಳಿ ಆಯೋಜಿಸುವ ಮೂಲಕ ಕ್ರೀಡಾಪಟುಗಳಿಗೆ ಆಸರೆಯಾಗಿವೆ ಎಂದು ಕೃತಜ್ಞತೆ ಸಲ್ಲಿಸಿದರು.
ನಂತರ ಮಾತಾಡಿದ ಕ್ಲಬ್ ಉಪಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಅವರು, ನಮ್ಮ ಕ್ಲಬ್ ಗೆ 125 ವರ್ಷಗಳು ಸಂದಿವೆ. ಈ ನಿಟ್ಟಿನಲ್ಲಿ ಬಿಲಿಯರ್ಡ್ಸ್ ಟೂರ್ನಮೆಂಟ್ ಆಯೋಜಿಸಲಾಗಿದೆ. ದೇವರ ಆಶೀರ್ವಾದದಿಂದ ಈ ಕ್ರೀಡಾಕೂಟ ಒಳ್ಳೆಯ ರೀತಿಯಲ್ಲಿ ನಡೆಯಲಿ ಎಂದು ಶುಭ ಹಾರೈಸಿದರು.
ಈ ಚಾಂಪಿಯನ್ ಶಿಪ್ ಫೆಬ್ರವರಿ 20ರಿಂದ ಮಾರ್ಚ್ 1ರವರೆಗೆ ನಡೆಯುತ್ತಿದ್ದು, ಫೆಬ್ರವರಿ 25ರಿಂದ ಕ್ವಾಲಿಫೈಡ್ ಪಂದ್ಯಗಳು ಆರಂಭವಾಗಿವೆ. ಬಿ. ಭಾಸ್ಕರ್, ಎಂ. ಯೋಗೀಶ್, ಬಿ.ಸಿ. ಕಾರ್ತಿಕ್ ಮತ್ತು ಕೀರ್ತಿ ಪಾಂಡ್ಯ ಸೇರಿದಂತೆ ದೇಶದ ಖ್ಯಾತನಾಮ 14 ಮಂದಿ ರಾಷ್ಟ್ರಮಟ್ಟದ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ಎಂ.ಸಿ.ಶೆಟ್ಟಿ, ಕೋಶಾಧಿಕಾರಿ ದೇವಿಚರಣ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಯೋಗೀಶ್ ಕುಮಾರ್ ಹಾಗೂ ಪದಾಧಿಕಾರಿಗಳಾದ ರಾಮರಾಜ್ ರೈ, ಮನೋಜ್, ಪ್ರದೀಪ್, ಪ್ರಸಾದ್ ರೈ ಕಲ್ಲಿಮಾರ್, ಪಿ.ವಿ.ಹೆಗ್ಡೆ, ಉದಯ ಶಂಕರ್ ರೈ ಮತ್ತಿತರರು ಉಪಸ್ಥಿತರಿದ್ದರು.

