ಉಡುಪಿಯ ಕುಂತಲನಗರದಲ್ಲಿ ಬೋನಿಗೆ ಬಿದ್ದ ಚಿರತೆ (video)
ಉಡುಪಿಯ ಕುಂತಲನಗರದ ದೇವಳಗುಜ್ಜಿ ಎಂಬಲ್ಲಿ ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ಇಂದು ಬೆಳಗ್ಗಿನ ಜಾವ ಸೆರೆಯಾಗಿದೆ.
ದೇವಳಗುಜ್ಜಿ ಪರಿಸರದಲ್ಲಿ ಕಳೆದ ಎರಡು ವಾರಗಳ ಹಿಂದೆ ಚಿರತೆಯೊಂದು ಓಡಾಟ ನಡೆಸುತ್ತಿದೆ ಎಂಬ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಕಳೆದ ವಾರ ಚಿರತೆ ಸೆರೆಗಾಗಿ ಬೋನನ್ನು ಇರಿಸಿದ್ದರು. ಬೆಳಗ್ಗೆ ಆಹಾರ ಅರಸಿ ಬಂದ ಚಿರತೆ ಈ ಬೋನಿನಲ್ಲಿ ಸೆರೆಯಾಗಿದೆ.
ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಉಡುಪಿ ವಲಯ ಅರಣ್ಯ ಇಲಾಖೆಯವರಿಗೆ ಈ ಕುರಿತು ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಿದ್ದಾರೆ. 2-3 ವರ್ಷ ಈ ಹೆಣ್ಣು ಚಿರತೆಯನ್ನು ಬಳಿಕ ವೈದ್ಯಾಧಿಕಾರಿಗಳು ತಪಾಸಣೆ ನಡೆಸಿದ್ದು, ನಂತರ ಅದನ್ನು ಅಭಯಾರಣ್ಯದಲ್ಲಿ ಬಿಡಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಮುಹಮ್ಮದ್ ಜುನೈದ್ ಅಖ್ತರ್, ಶಿವಾನಂದ, ಗಸ್ತು ಅರಣ್ಯ ಪಾಲಕ ಶ್ರೀನಿವಾಸ ಜೋಗಿ, ಉಚ್ಚು ಟ್ರಸ್ಟ್ ನ ಸಂಯೋಜಕ ಅಕ್ಷಯ ಶೇಟ್ ಪಾಲ್ಗೊಂಡಿದ್ದರು.