-->
 ಪೊಲೀಸ್ ಇಲಾಖೆಯ ಬಹುಕಾಲದ "ಆರ್ಡರ್ಲಿ ಪದ್ಧತಿ" ಕೊನೆಗೂ ಅಂತ್ಯ

ಪೊಲೀಸ್ ಇಲಾಖೆಯ ಬಹುಕಾಲದ "ಆರ್ಡರ್ಲಿ ಪದ್ಧತಿ" ಕೊನೆಗೂ ಅಂತ್ಯ


ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದೀರ್ಘಕಾಲದಿಂದ ಇದ್ದ ‘ಆರ್ಡರ್ಲಿ’ ಪದ್ಧತಿ ಕೊನೆಗೂ ಅಂತ್ಯ ಕಂಡಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರ ಆದೇಶದ ಹಿನ್ನೆಲೆ ಕಾಲೋನಿಯಲ್ ಯುಗದ ಆರ್ಡರ್ಲಿ ಪದ್ಧತಿ ರದ್ದುಪಡಿಸಲಾಗಿದೆ. ಇದು ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ನಿರ್ಧಾರವೆಂದು ಹೇಳಲಾಗಿದೆ.

ಆರ್ಡರ್ಲಿ ಪದ್ಧತಿ ಬ್ರಿಟಿಷ್ ಕಾಲದಲ್ಲಿ ಆರಂಭವಾದ ವ್ಯವಸ್ಥೆ. ಈ ವ್ಯವಸ್ಥೆಯಡಿ ಪೊಲೀಸ್ ಕಾನ್ಸ್ಟೇಬಲ್‌ಗಳನ್ನು ಹಿರಿಯ ಅಧಿಕಾರಿಗಳ ಮನೆಗಳಿಗೆ ನಿಯೋಜಿಸಿ, ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಸುವ ಪದ್ಧತಿ ನಡೆದುಬಂದಿತ್ತು. ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು, ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು ಸೇರಿದಂತೆ ಹಲವಾರು ಮನೆ ಕೆಲಸಗಳಿಗೆ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿತ್ತು.

ಸ್ವಾತಂತ್ರ‍್ಯದ ನಂತರವೂ ಈ ಪದ್ಧತಿ ಕೆಲವು ರಾಜ್ಯಗಳಲ್ಲಿ ಮುಂದುವರಿದಿದ್ದು, ಕಾಲಕ್ರಮೇಣ ಇದರ ಬಗ್ಗೆ ಟೀಕೆಗಳು ಹೆಚ್ಚಾಗಿದ್ದವು. ಪೊಲೀಸ್ ಸಿಬ್ಬಂದಿಯನ್ನು ಸಾರ್ವಜನಿಕ ಸೇವೆಗಾಗಿ ನೇಮಕ ಮಾಡಲಾಗಿದ್ದರೂ, ಅವರನ್ನು ಹಿರಿಯ ಅಧಿಕಾರಿಗಳ ಮನೆ ಕೆಲಸಗಳಿಗೆ ಬಳಸುವುದು ನ್ಯಾಯಸಮ್ಮತವಲ್ಲ ಎಂಬ ಅಭಿಪ್ರಾಯ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ಕರ್ನಾಟಕದಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿ ಕೊರತೆ ಇದೆ ಎಂಬುದು ಹಲವು ವರದಿಗಳಲ್ಲಿ ಉಲ್ಲೇಖವಾಗುತ್ತಲೇ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಕಾನ್ಸ್ಟೇಬಲ್‌ಗಳು ಮೂಲ ಪೊಲೀಸ್ ಕರ್ತವ್ಯಗಳ ಬದಲಾಗಿ ಅಧಿಕಾರಿಗಳ ಮನೆ ಕೆಲಸಗಳಿಗೆ ನಿಯೋಜನೆಯಾಗಿರುವುದು ವ್ಯವಸ್ಥೆಯ ಮೇಲೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಇದರಿಂದಾಗಿ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಗೂ ಪರಿಣಾಮ ಬೀರುತ್ತಿತ್ತು. ಸಾರ್ವಜನಿಕ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಮುಖ್ಯ ಕರ್ತವ್ಯವಾಗಿದ್ದರೂ, ಸಿಬ್ಬಂದಿಯ ಒಂದು ಭಾಗ ಹಿರಿಯ ಅಧಿಕಾರಿಗಳ ವೈಯಕ್ತಿಕ ಕೆಲಸಗಳಲ್ಲಿ ನಿರತರಾಗಿರುವುದು ಸಮಸ್ಯೆಯಾಗಿತ್ತು. ಹೊಸ ನಿರ್ಧಾರದಂತೆ ಆರ್ಡರ್ಲಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 3,320 ಪೊಲೀಸ್ ಸಿಬ್ಬಂದಿಯನ್ನು ಹಿಂತೆಗೆದು ಮತ್ತೆ ಪೊಲೀಸ್ ಕರ್ತವ್ಯಗಳಿಗೆ ನಿಯೋಜಿಸಲಾಗುತ್ತದೆ. ಇದರಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಹೆಚ್ಚಿನ ಸಿಬ್ಬಂದಿ ಲಭ್ಯವಾಗಲಿದ್ದಾರೆ.

ಇದಕ್ಕೆ ಪರ್ಯಾಯವಾಗಿ 373 ಆರ್ಡರ್ಲಿ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆ ಮಾಡಲಾಗಿದೆ. ಆದರೆ, ಇವರು ಪೊಲೀಸ್ ಸಿಬ್ಬಂದಿ ಅಲ್ಲದ ಪ್ರತ್ಯೇಕ ಸಿಬ್ಬಂದಿಯಾಗಿರಲಿದ್ದಾರೆ. ಇದರ ಜೊತೆಗೆ ಅಧಿಕಾರಿಗಳಿಗೆ ಹುದ್ದೆ ಆಧಾರಿತವಾಗಿ ಮಾಸಿಕ ಭತ್ಯೆ ನೀಡುವ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ. ಉದಾಹರಣೆಗೆ ಡಿಜಿ ಹುದ್ದೆಯವರಿಗೆ ತಿಂಗಳಿಗೆ ರೂ.8,000, ಎಡಿಜಿಪಿಗಳಿಗೆ ರೂ.6,000, ಐಜಿಪಿಗಳಿಗೆ ರೂ.5,000, ಡಿಐಜಿ ಮತ್ತು ಎಸ್‌ಪಿ ಹುದ್ದೆಯವರಿಗೆ ರೂ.3,000 ಹಾಗೂ ಇತರ ಅಧಿಕಾರಿಗಳಿಗೆ ರೂ.2,000 ಭತ್ಯೆ ನೀಡುವ ಪ್ರಸ್ತಾವನೆ ಇದೆ.

Ads on article

Advertise in articles 1

advertising articles 2

Advertise under the article