INSPIRE–MANAK ಪ್ರಶಸ್ತಿಗೆ ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಆಯ್ಕೆ
ಉಡುಪಿ ಕುಂಜಿಬೆಟ್ಟು ಟಿ. ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ (ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲದ ಘಟಕ)ದ ಇಬ್ಬರು ವಿದ್ಯಾರ್ಥಿಗಳು 2025–26ನೇ ಸಾಲಿನ ಪ್ರತಿಷ್ಠಿತ INSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆಯಾಗಿದ್ದಾರೆ.
ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ 9ನೇ ತರಗತಿಯ ಅವನೀಶ್ ಕೆ. ಎಸ್. ಹಾಗೂ 10ನೇ ತರಗತಿಯ ದೀಪೇಶ್ ದೀಪಕ್ ಶೆಣೈ (ಕರ್ನಾಟಕ ಸರ್ಕಾರದ "ಹೊಯ್ಸಳ ಶೌರ್ಯ ಪ್ರಶಸ್ತಿ 2025" ಪುರಸ್ಕೃತರು) ವಿಜ್ಞಾನಾಧಾರಿತ ಹಾಗೂ ಸಮಾಜಮುಖಿ ನವೀನ ಕಲ್ಪನೆಗಳಿಗಾಗಿ ಆಯ್ಕೆಯಾಗಿದ್ದಾರೆ.
ಈ ಯೋಜನೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಮುಖ ಯೋಜನೆಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಅದರ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನೋವೇಶನ್ ಫೌಂಡೇಶನ್–ಇಂಡಿಯಾ (NIF) ಸಹಯೋಗದಲ್ಲಿ ಜಾರಿಗೆ ತರಲಾಗುತ್ತಿದೆ.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿನೋದಾ ಶೆಟ್ಟಿ ಪುರಸ್ಕೃತ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರ ಸೃಜನಶೀಲತೆ, ವೈಜ್ಞಾನಿಕ ಮನೋಭಾವ ಮತ್ತು ನವೀನ ಚಿಂತನೆಗೆ ತೋರಿದ ಸಮರ್ಪಣೆಯನ್ನು ಪ್ರಶಂಸಿದರು. ಈ ಸಾಧನೆ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ಸೃಜನಾತ್ಮಕ ಚಿಂತನೆ ಬೆಳೆಸುವಲ್ಲಿ ಶಾಲೆಯ ನಿರಂತರ ಪ್ರಯತ್ನಗಳ ಪ್ರತಿಫಲವಾಗಿದೆ ಎಂದು ಹೇಳಿದರು. ಜೊತೆಗೆ ಶಿಕ್ಷಣ ಇಲಾಖೆಯಿಂದ ಆಯೋಜಿಸಲಿರುವ ಜಿಲ್ಲಾ ಮಟ್ಟದ ವಿಜ್ಞಾನ ಪ್ರದರ್ಶನ ಹಾಗೂ ಯೋಜನಾ ಸ್ಪರ್ಧೆ (DLEPCs) ಯಲ್ಲಿ ಭಾಗವಾಗಿಸಲು ಅರ್ಹತೆ ಪಡೆದ ಈ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದ್ದಾರೆ.
ಅಕಾಡೆಮಿ ಆಫ್ ಜನರಲ್ ಎಜುಕೇಶನ್ (AGE), ಮಣಿಪಾಲದ ಆಡಳಿತಾಧಿಕಾರಿ ಡಾ. ಶ್ರೀಧರ್ ರಂಗನಾಥ ಪೈ ಯವರು ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, ಸಂಸ್ಥೆ ಸುವರ್ಣ ಮಹೋತ್ಸವದ ಸಂಭ್ರಮದತ್ತ ಸಾಗುತ್ತಿರುವ ಸಂದರ್ಭದಲ್ಲಿ ಈ ಸಾಧನೆ ಶಾಲೆಗೆ ಮತ್ತೊಂದು ಮಹತ್ವದ ಮೈಲುಗಲ್ಲು ಎಂದು ಅಭಿಪ್ರಾಯಪಟ್ಟಿದ್ದಾರೆ. ಶಾಲಾ ಬೋಧಕ, ಬೋಧಕೇತರ ಸಿಬ್ಬಂದಿ, ಶಿಕ್ಷಕ-ರಕ್ಷಕ ಸಂಘ, ಶಾಲಾ ಹಳೆವಿದ್ಯಾರ್ಥಿಗಳ ಸಂಘವು ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.