ಚಿಕಿತ್ಸೆಗೆ ಸ್ಪಂದಿಸಿದ ಮೂವರು ಮಹಿಳೆಯರು ನಿಟ್ಟೂರಿನ ಮಹಿಳಾ ನಿಲಯಕ್ಕೆ ದಾಖಲು
Friday, April 03, 2026
ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಸ್ಥಳಗಳಿಂದ ರಕ್ಷಿಸಲ್ಪಟ್ಟ ಮೂವರು ಮಾನಸಿಕ ಅಸ್ವಸ್ಥ ಮಹಿಳೆಯರು ಚಿಕಿತ್ಸೆ ಪಡೆದು ಸಹಜ ಸ್ಥಿತಿಗೆ ಮರಳಿದ ಬಳಿಕ ಅವರನ್ನು ನಿಟ್ಟೂರಿನ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರು ಕಾಪು, ಮಣಿಪಾಲ ಹಾಗೂ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಮಹಿಳೆಯರನ್ನು ರಕ್ಷಿಸಿದ್ದರು. ರಕ್ಷಿಸಲ್ಪಟ್ಟವರಲ್ಲಿ ಉತ್ತರ ಪ್ರದೇಶದ ಖುಷಿಯಾ (30), ಮಹಾರಾಷ್ಟ್ರದ ಅನಿತಾ (35) ಮತ್ತು ಆತ್ರಾಡಿ ಮೂಲದ ಜಯಂತಿ ಪೂಜಾರಿ (45) ನಿಟ್ಟೂರಿನ ರಾಜ್ಯ ಮಹಿಳಾ ನಿಲಯಕ್ಕೆ ಸೇರಿದ್ದಾರೆ.
ರಕ್ಷಿಸಿದ ಬಳಿಕ ಇವರಿಗೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದ್ದು, ವೈದ್ಯರಾದ ಡಾ. ವಾಸುದೇವ ಹಾಗೂ ಡಾ. ಸುನಿಲ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಮತ್ತು ಇಸಿಆರ್ಸಿ ಸುರೇಶ್ ಅವರ ಸಹಕಾರದಿಂದ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಗನುಸಾರ ಮಹಿಳೆಯರು ಶೀಘ್ರದಲ್ಲೇ ಸ್ಪಂದಿಸಿ ಸಹಜ ಸ್ಥಿತಿಗೆ ಬಂದಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸಂಬಂಧಿಕರು ಪತ್ತೆಯಾಗದ ಕಾರಣ, ಹಾಗೂ ಅವರಿಂದ ಯಾವುದೇ ಪ್ರತಿಕ್ರಿಯೆ ದೊರಕದ ಹಿನ್ನೆಲೆಯಲ್ಲಿ, ಮೂವರನ್ನೂ ನಿಟ್ಟೂರಿನ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ಹಾಗೂ ಕಾನೂನು ಪ್ರಕ್ರಿಯೆಗಳನ್ನು ವಿಶು ಶೆಟ್ಟಿ ಅವರು ಪೂರ್ಣಗೊಳಿಸಿದ್ದಾರೆ. ಸಂಬಂಧಿಕರು ಸಂಬಂಧಿಸಿದ ಮಹಿಳಾ ನಿಲಯವನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
.jpeg)
.jpeg)