ಗಾಯಕ ಯಶವಂತ್ ಎಂ.ಜಿ ಅವರ "ಬನ್ನಂಜೆ ಒಡೆಯ ಮಹಾಲಿಂಗೇಶ್ವರ" ಧ್ವನಿಸುರುಳಿ ಬಿಡುಗಡೆ(Video)
Friday, April 03, 2026
ಉಡುಪಿಯ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಖ್ಯಾತ ಗಾಯಕ, ವಿಶ್ವ ದಾಖಲೆ ಹೊಂದಿರುವ ವಿದ್ವಾನ್ ಯಶವಂತ್ ಎಂ.ಜಿ ಅವರ ಮಧುರಕಂಠದಿಂದ ಮೂಡಿಬಂದ "ಬನ್ನಂಜೆ ಒಡೆಯ ಮಹಾಲಿಂಗೇಶ್ವರ" ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನೆರವೇರಿತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಧ್ವನಿ ಸುರುಳಿ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಹಲವು ಬಾರಿ ಬನ್ನಂಜೆ ಪರಿಸರದಲ್ಲಿ ಓಡಾಡುತ್ತಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ದೇವರೇ ದೇವಸ್ಥಾನಕ್ಕೆ ಕರೆಸಿಕೊಂಡಿದ್ದಾರೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಎಲ್ಲಾ ಕಾರ್ಯಕ್ರಮವು ಸುಸೂತ್ರವಾಗಿ ನೆರವೇರಲು ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗುವುದು ಎಂದರು.
ಗಾಯಕ ವಿದ್ವಾನ್ ಯಶವಂತ್ ಎಂ.ಜಿ ಮಾತನಾಡಿ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಇತಿಹಾಸದ ಆಧಾರದಲ್ಲಿ ಸಾಹಿತ್ಯವನ್ನು ರಚಿಸಿ ಬಹಳ ಸುಂದರವಾಗಿ ಆಧ್ಯಾತ್ಮದ ತಿರುವಿನೊಂದಿಗೆ ಹಾಡನ್ನು ರಚಿಸಿದ್ದೇವೆ. 2 ದಿನದೊಳಗಡೆ ಹಗಲು ರಾತ್ರಿ ಕೆಲಸ ಮಾಡಿ "ಬನ್ನಂಜೆ ಒಡೆಯ ಮಹಾಲಿಂಗೇಶ್ವರ " ಹಾಡು ಸುಂದರವಾಗಿ ಮೂಡಿ ಬಂದಿದೆ ಎಂದರು.
ಹೆಚ್.ಪಿ.ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಮಣಿಪಾಲ ಇದರ ಅಧ್ಯಕ್ಷ ಹರಿಪ್ರಸಾದ್ ರೈ, ಮೂಡು ನಿಡಂಬೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಗಣೇಶ್ ರಾವ್ ಸೇರಿದಂತೆ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಬನ್ನಂಜೆ ಸ್ವಾಗತಿಸಿ, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ರಮೇಶ್ ಕಾಂಚನ್ ವಂದಿಸಿದರು. ದೇವಸ್ಥಾನದ ಅರ್ಚಕ ಮಧುಸೂದನ್ ಉಪಾಧ್ಯಾಯ ಪ್ರಾರ್ಥಿಸಿ, ಕೃತಿ ಮೂಡುಬೆಟ್ಟು ಕಾರ್ಯಕ್ರಮ ನಿರೂಪಿಸಿದರು.


