ವಿದ್ಯಾರ್ಥಿಗಳು ಮಾರ್ಕ್ಸ್ ನ ಹಿಂದೆ ಬಿದ್ದು ಮಾನವೀಯತೆ ಮರೆಯಬಾರದು: ದಯಾನಂದ ಡಿ. ಕಿದಿಯೂರು
ವಿದ್ಯಾರ್ಥಿಗಳು ಕೇವಲ ಮಾರ್ಕ್ಸ್ ನ ಹಿಂದೆ ಬಿದ್ದು ಮಾನವೀಯತೆಯನ್ನು ಕಲಿಯುವುದನ್ನು ಮರೆಯಬಾರದು. ಶಿಕ್ಷಣದೊಂದಿಗೆ ಮಾನವೀಯತೆಯನ್ನು ಬೆಳೆಸಿ ಕೊಂಡಾಗ ಮಾತ್ರ ನಾವು ಕಲಿತ ಶಿಕ್ಷಣಕ್ಕೆ ಬೆಲೆ ಸಿಗಲಿದೆ ಎಂದು ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕ ದಯಾನಂದ ಡಿ. ಕಿದಿಯೂರು ಅವರು ಅಭಿಪ್ರಾಯಪಟ್ಟರು.
2017ನೇ ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಹಿಂದೂ ಶಾಲಾ ಸಭಾಂಗಣದಲ್ಲಿ ಜರಗಿದ ಪಿಯುಸಿ ವಿದ್ಯಾರ್ಥಿಗಳಿಗೆ ಯು.ಎಫ್.ಸಿ. ಪುಸ್ತಕ ಭಂಡಾರದಿಂದ ಪಠ್ಯ ಪುಸ್ತಕ ವಿತರಿಸಿ ಅವರು ಮಾತನಾಡಿದರು.
ಬಡತನ ರೇಖೆಯಲ್ಲಿರುವ ಅಥವಾ ಕೆಳಗಿರುವ ವಿದ್ಯಾರ್ಥಿಗಳ ಶಿಕ್ಷಣವನ್ನು ಮುಂದುವರಿಸಲು ಬಡತನ ಎಂದೂ ಅಡ್ಡಿಯಾಗುವುದಿಲ್ಲ. ಸರಕಾರದ ಕಾರ್ಯಕ್ರಮವಾಗಲಿ್, ದಾನಿಗಳ ಸಹಾಯ ಹಸ್ತವಾಗಲ,ಸಂಘ ಸಂಸ್ಥೆಗಳ ನೆರವಾಗಲಿ ಹಿಂದಿಗಿಂತಲೂ ಇಂದು ಸಕಾಲದಲ್ಲಿ ದೊರೆಯುತ್ತದೆ. ಅದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸ ಬಹುದು.
ಕಳೆದ ಇಪ್ಪತೆರಡಕ್ಕೂ ಹೆಚ್ಚು ವರ್ಷಗಳಿಂದ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸಂಸ್ಥೆಯು ಹಲವಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದೆ. ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿ ತಮ್ಮ ಕಾಲ ಮೇಲೆ ನಿಂತಾಗ ಇನ್ನೊಬ್ಬ ವಿದ್ಯಾರ್ಥಿಗೆ ಸಹಾಯ ಮಾಡುವುದರ ಮೂಲಕ ತಮ್ಮ ಋಣ ಸಂದಾಯ ಮಾಡಬಹುದು ಎಂದರು.
ಮಕ್ಕಳು ಮೊಬೈಲ್ ನಿಂದ ಹೊರ ಬಂದು ಓದಿನತ್ತ ಗಮನ ಕೊಡಬೇಕು. ಕೇವಲ ಮಾರ್ಕಿನ ಹಿಂದೆ ಬಿದ್ದ ಮಾನವೀಯತೆಯನ್ನು ಕಲಿಯುವುದನ್ನು ಮರೆಯ ಬೇಡಿ .ಶಿಕ್ಷಣದೊಂದಿಗೆ ಮಾನವೀಯತೆಯನ್ನು ಬೆಳೆಸಿ ಕೊಂಡಾಗ ಮಾತ್ರ ನಾವು ಕಲಿತ ಶಿಕ್ಷಣಕ್ಕೆ ಬೆಲೆ ಬರುವುದು . ಇಲ್ಲಿ ಪಡಕೊಂಡ ಪುಸ್ತಕ ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ತಂದೆ ತಾಯಿ , ಗುರುಹಿರಿಯರಿಗೆ ಗೌರವ ಕೊಡುವುದು ಇಂದಿನ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿದೆ . ಅದಕ್ಕೆ ನಾನಾ ಕಾರಣಗಳಿರ ಬಹುದು. ಆದರೆ ಮುಖ್ಯ ಕಾರಣ ನಾವು ಇಂದು ಮಕ್ಕಳಿಗೆ ಹಾಕುವ ಒತ್ತಡ . ಈ ಒತ್ತಡವನ್ನು ಕಡಿಮೆ ಮಾಡುವ ಜವಾಬ್ದಾರಿ ಹೆತ್ತವರದ್ದಾಗಿದೆ. ನಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸದೇ ಅವರನ್ನು ಅವರಷ್ಟಕ್ಕೆ ಬೆಳೆಯಲು ಬಿಡಿ ಎಂದರು .
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಅವರು ಮಾತನಾಡಿ, ಇಂದು ವಿದ್ಯಾರ್ಥಿಗಳು ವಾಟ್ಸ್ ಆ್ಯಪಲ್ಲಿ ಬರುವ ಸುದ್ದಿಗಳನ್ನು ಸತ್ಯ ಎಂದು ಭ್ರಮಿಸಿ ವರ್ತಿಸುವುದನ್ನು ನಿಲ್ಲಿಸಬೇಕಾಗಿದೆ. ನಮಗೆ ಜ್ಞಾನ ಹಂಚುವುದು ಶಿಕ್ಷಣ ಸಂಸ್ಥೆಗಳು ವಿನಹಾ ವಾಟ್ಸ್ ಅ್ಯಪ್ ಸಂಸ್ಥೆಗಳಲ್ಲ ಎಂಬುದನ್ನು ಅರಿತು ಕೊಳ್ಳಬೇಕು . ಈ ಬಗ್ಗೆ ಹೆತ್ತವರು ಜಾಗ್ರತೆ ವಹಿಸಿ ಮಕ್ಕಳಿಗೆ ತಿಳಿ ಹೇಳಬೇಕಾಗಿದೆ. ನಿರಂತರವಾಗಿ ಸಂಸ್ಥೆ ಮಕ್ಕಳ ಶಿಕ್ಷಣವನ್ನು ಕೇಂದ್ರಿಕರಿಸಿ ಕೊಂಡು ವಿವಿಧ ಕಾರ್ಯಕ್ರಮವನ್ನು ಹಮ್ಮಿ ಕೊಂಡು ಬರುತ್ತಾ ಇದೆ. ಪುಸ್ತಕ ಭಂಡಾರದಿಂದ ಪುಸ್ತಕ ವಿತರಣೆಯೂ ಒಂದು. ಕಳೆದ ಇಪ್ಪತ್ತೆರಡು ವರ್ಷದಿಂದ ಸಾವಿರಾರು ಮಕ್ಕಳು ಫಲಾನುಭವಿಗಳಾಗಿದ್ದಾರೆ. ಇದು ನಿರಂತರವಾಗಿ ಮುಂದುವರಿಯುವಂತಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಭಂಡಾರಿ, ಶರತ್ ಕುಮಾರ್ ಯು.ಪದ್ಮನಾಭ ಕಾಮತ್ ,ಕೋಶಾಧಿಕಾರಿ ಸತೀಶ್ ಡಿ. ಸಾಲ್ಯಾನ್ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲ ವಂದಿಸಿದರು .
ಸುಮಾರು 100 ವಿದ್ಯಾರ್ಥಿಗಳು ಪುಸ್ತಕ ಭಂಡಾರದಿಂದ ಪಠ್ಯ ಪುಸ್ತಕಗಳನ್ನು ಪಡೆದುಕೊಂಡರು.
