ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ದೆಹಲಿ ಪೊಲೀಸರಿಂದ ಆಸ್ಪತ್ರೆಗೆ ಸ್ಥಳಾಂತರ
Saturday, July 18, 2026
ಜೂನ್ 28 ರಿಂದ ನವದೆಹಲಿಯ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಮುಖ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಶನಿವಾರ ದೆಹಲಿ ಪೊಲೀಸರು ಪ್ರತಿಭಟನಾ ಸ್ಥಳದಿಂದ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅವರನ್ನು ಆಸ್ಪತ್ರೆಗೆ ಸಾಗಿಸುವ ಪೊಲೀಸರು ಯಾರಿಗೂ ಕಾಣದಂತೆ ಬಿಳಿ ಬಟ್ಟೆ ಅಡ್ಡ ಹಿಡಿದಿರುವುದು ತೀರಾ ಆಭಾಸಕರ ಕಂಡು ಬಂತು.
ಎಎನ್ಐ ಸುದ್ದಿ ಸಂಸ್ಥೆ ಪ್ರಕಾರ, 59 ವರ್ಷದ ಸೋನಮ್ ವಾಂಗ್ಚುಕ್ ಅವರನ್ನು ಸರ್ಕಾರಿ ಸ್ವಾಮ್ಯದ ಸಫ್ದರ್ಜಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದೆ. "ಅವರು ಪ್ರಜ್ಞೆ ಹೊಂದಿದ್ದಾರೆ ಮತ್ತು ಅವರ ಪ್ರಮುಖ ಅಂಗಗಳ ಕಾರ್ಯಗಳು ಸ್ಥಿರವಾಗಿದೆ" ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಪೊಲೀಸರು, ದೆಹಲಿ ಹೈಕೋರ್ಟ್ನ ಆದೇಶ ಮತ್ತು ತಜ್ಞರ ವೈದ್ಯಕೀಯ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
"ಮಾನ್ಯ ಹೈಕೋರ್ಟ್ನ ಆದೇಶದಂತೆ ಮತ್ತು ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ವೈದ್ಯಕೀಯ ಸಲಹೆಯ ಮೇರೆಗೆ, ಅಗತ್ಯ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೈಕೋರ್ಟ್ನ ಆದೇಶವನ್ನು ಪಾಲಿಸುವ ವೇಳೆ ಪ್ರತಿಭಟನಾಕಾರರು ಅಡ್ಡಿಪಡಿಸಲು ಯತ್ನಿಸಿದ ಕಾರಣ ಸ್ವಲ್ಪ ಗೊಂದಲ ಉಂಟಾಯಿತು. ಆದಾಗ್ಯೂ ಪೊಲೀಸರು ಈ ಕಾರ್ಯವನ್ನು ಸುರಕ್ಷಿತವಾಗಿ ನಿರ್ವಹಿಸಿದರು. ಜಂತರ್ ಮಂತರ್ನಲ್ಲಿರುವ ಪ್ರತಿಭಟನಾಕಾರರು ಕೂಡಲೇ ಸ್ಥಳವನ್ನು ಶಾಂತಿಯುತವಾಗಿ ತೆರವುಗೊಳಿಸುವಂತೆ ಕೋರುತ್ತೇವೆ" ಎಂದು ದೆಹಲಿ ಪೊಲೀಸ್ ಪ್ರಕಟಣೆ ತಿಳಿಸಿದೆ.