ಬಂಕೇರಕಟ್ಟದಲ್ಲಿ 'ಕೆಸರ್ಡ್ ಒಂಜಿ ದಿನ' ಗ್ರಾಮೀಣ ಕ್ರೀಡಾಕೂಟ
ಎನ್.ಸಿ. ಯೂತ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್, ಬಂಕೇರಕಟ್ಟ ಅಂಬಲಪಾಡಿ ಇದರ ಆಶ್ರಯದಲ್ಲಿ ಶ್ರೀ ನಾಗರಾಜ ಸೇವಾ ಸಮಿತಿ ಹಾಗೂ ಶ್ರೀ ನಾಗರಾಜ ಮಹಿಳಾ ಸೇವಾ ಸಮಿತಿಯ ಸಹಯೋಗದಲ್ಲಿ 'ಕೆಸರ್ಡ್ ಒಂಜಿ ದಿನ' ಗ್ರಾಮೀಣ ಕ್ರೀಡಾಕೂಟವು ಬಂಕೇರಕಟ್ಟ ಕೆಸರು ಗದ್ದೆಯಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪರಂಪರೆ, ಸಂಸ್ಕೃತಿ ಮತ್ತು ಕ್ರೀಡೆಗಳನ್ನು ಹೊಸ ಪೀಳಿಗೆಗೆ ಪರಿಚಯಿಸಿ, ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕೆಸರು ಗದ್ದೆಗೆ ಸಾಮೂಹಿಕವಾಗಿ ಹಾಲು ಎರೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು, ಯುವಕರು, ಯುವತಿಯರು ಹಾಗೂ ಹಿರಿಯರು ಸೇರಿದಂತೆ ವಿವಿಧ ವಯೋಮಾನದ ಸ್ಪರ್ಧಿಗಳು ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು. ಮಧ್ಯಾಹ್ನ ನಡೆದ ಸಾಮೂಹಿಕ ಭೋಜನದಲ್ಲಿ 500ಕ್ಕೂ ಅಧಿಕ ಕ್ರೀಡಾಪಟುಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡರು.
ಕ್ಲಬ್ ಅಧ್ಯಕ್ಷ ಕಾರ್ತಿಕ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಲ್ಪೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ವಿಜೇತರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಎನ್.ಸಿ. ಯೂತ್ ಸ್ಪೋರ್ಟ್ಸ್ ಎಂಡ್ ಕಲ್ಚರಲ್ ಕ್ಲಬ್ ಗೌರವಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಶ್ರೀ ನಾಗರಾಜ ಸೇವಾ ಸಮಿತಿಯ ಅಧ್ಯಕ್ಷ ಶಿವಾಜಿ ಸನಿಲ್, ಗೌರವಾಧ್ಯಕ್ಷರಾದ ಸುಧಾಕರ ಮೆಂಡನ್ ಹಾಗೂ ವಿಶ್ವನಾಥ್ ಹೆಗ್ಡೆ, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಿವದಾಸ್ ಪಿ., ಅಂಬಲಪಾಡಿ ಪಡುಪಾಲು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ದೇವದಾಸ್, ಅಪರ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಯತೀಶ್ ಕಿದಿಯೂರು, ಕ್ಲಬ್ ಸ್ಥಾಪಕಾಧ್ಯಕ್ಷ ದಾಮೋದರ್ ಕುಂದರ್, ಗೌರವ ಸಲಹೆಗಾರರಾದ ರಾಜೇಶ್ ಸುವರ್ಣ, ಕಿರಣ್ ಕುಮಾರ್, ಸದಾನಂದ ಕಾಂಚನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು, ಕ್ರೀಡಾಪಟುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಉದಯೋನ್ಮುಖ ಸಂಗೀತ ಕಲಾವಿದೆ ಶ್ರೀಯಾ ಎಸ್. ಪೂಜಾರಿ ಪ್ರಾರ್ಥನೆಗೈದರು. ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೂಪೇಶ್ ಪೂಜಾರಿ ವಂದಿಸಿದರು. ಅಶ್ವಥ್ ಪೂಜಾರಿ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.
.jpeg)
.jpeg)
