ಉಡುಪಿಯ ಮಹಾಲಕ್ಷ್ಮೀ ಬ್ಯಾಂಕ್ ಬಹುಕೋಟಿ ಹಗರಣ ಎಸ್.ಐ.ಟಿ. ತನಿಖೆಗೆ ವಿಧಾನ ಪರಿಷತ್ ನಲ್ಲಿ ಬಿ.ಕೆ. ಹರಿಪ್ರಸಾದ್ ಆಗ್ರಹ
ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆಯ ಉಡುಪಿ ಮೂಲದ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ನಡೆದ ಬಹುಕೋಟಿ ವಂಚನೆ ಹಗರಣ ಹಾಗೂ ಅದಕ್ಕೆ ಸಂಬಂಧಿಸಿದಂತೆ ನಡೆದ ಮ್ಯಾನೇಜರ್ ಅವರ ಅಸಹಜ ಸಾವಿನ ಕುರಿತಂತೆ ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಬುಧವಾರ ವಿಧಾನ ಪರಿಷತ್ ನಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಬಹುಕೋಟಿ ಹಗರಣದಲ್ಲಿ 100ಕ್ಕೂ ಅಧಿಕ ಗ್ರಾಹಕರಿಗೆ 150 ಕೋಟಿಗೂ ಹೆಚ್ಚಿನ ವಂಚನೆಯಾಗಿದೆ. ಮಹಾಲಕ್ಷ್ಮೀ ಬ್ಯಾಂಕಿನ ಮ್ಯಾನೇಜರ್ ಸುಬ್ಬಣ್ಣ ಎಂಬವರು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಅವರು ಆತ್ಮಹತ್ಯೆಗೈದಿದ್ದಾರೆ ಎಂದು ಬಿಂಬಿಸಲಾಗಿದ್ದರೂ, ಅವರನ್ನು ಕೊಲೆ ಮಾಡಲಾಗಿದೆ ಎಂದು ಹರಿಪ್ರಸಾದ್ ನೇರವಾಗಿ ಆರೋಪಿಸಿದರು. ಈ ಬಗ್ಗೆ ಸಂತ್ರಸ್ಥ ಗ್ರಾಹಕರು ಮಹಾಲಕ್ಷ್ಮೀ ಬ್ಯಾಂಕ್ ಸಂತ್ರಸ್ಥ ಗ್ರಾಹಕರ ಹಿತರಕ್ಷಣಾ ವೇದಿಕೆಯ ಹೆಸರಿನಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಬ್ಯಾಂಕಿನ ಅಧ್ಯಕ್ಷರು ಶಾಸಕ ಯಶಪಾಲ್ ಸುವರ್ಣ ಆಗಿರುವುದರಿಂದ, ಅವರು ಪ್ರಭಾವ ಬಳಸಿ ತನಿಖೆಯಾಗುವುದನ್ನು ತಪ್ಪಿಸಿದ್ದಾರೆ. ಈ ಲೂಟಿಗೆ ಶಾಸಕ ಯಶಪಾಲ್ ಸುವರ್ಣ ನೇರವಾಗಿ ಕಾರಣರಾಗಿದ್ದಾರೆ. ಹಾಗಾಗಿ ಈ ಬಗ್ಗೆ ತನಿಖೆಗೆ ಎಸ್ ಐ ಟಿ ರಚಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.