ಡೇವಿಡ್ ಹಂತಕನ ಬಂಧನ: ಪರಾರಿಯಾಗಲು ಯತ್ನಿಸಿದ ವೇಳೆ ಆರೋಪಿ ಕಾಲಿಗೆ ಗುಂಡೇಟು
Saturday, August 08, 2026
ಮುದರಂಗಡಿ ಪೇಟೆಯಲ್ಲಿ ಕಾಂಗ್ರೆಸ್ ಮುಖಂಡ ಡೇವಿಡ್ನನ್ನು ಕೊಲೆಗೈದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಕಾಪು ಪಿಎಸ್ಐ ತೇಜಸ್ವಿ, ಕಾರ್ಕಳ ಗ್ರಾಮಾಂತರ ಪಿಎಸ್ಐ ಪ್ರಸನ್ನ, ಶಿರ್ವ ಪಿಎಸ್ಐ ಮಂಜುನಾಥ್ ಮರಬದ ಹಾಗು ಬೈಂದೂರು ಪಿಎಸ್ಐ ಮಹೇಶ್ ಅವರ ತಂಡವು ಬಂಧಿಸಿದೆ. ಆರೋಪಿ ರಾಜುನನ್ನು ಬಂಧಿಸಿ ಕರೆತರುತ್ತಿರುವಾಗ ಬೈಂದೂರು ಒತ್ತಿನೆಣೆ ಸಮೀಪ ಪೋಲಿಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಕಾಪು ಪಿಎಸ್ಐ ತೇಜಸ್ವಿ ಅವರು ತಮ್ಮ ಸರ್ವೀಸ್ ಪಿಸ್ತೂಲಿನಿಂದ ಶೂಟರ್ ರಾಜು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಆರೋಪಿ ರಾಜುಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡಿರುವ ಪಿಎಸ್ಐ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಎಸ್ಪಿ ಹರಿರಾಮ್ ಶಂಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಪಿಎಸ್ಐ ಅವರ ಅರೋಗ್ಯ ವಿಚಾರಿಸಿದ್ದಾರೆ.
ಆ.7 ರಂದು ಮಧ್ಯಾಹ್ನ ಸುಮಾರು 3.45 ರ ವೇಳೆಗೆ ಮುದುರಂಗಡಿಯಲ್ಲಿನ ತನ್ನ ಕಚೇರಿಯಿಂದ ತೆರಳಲು ಕಾರು ಹತ್ತುತ್ತಿದ್ದ ಡೇವಿಡ್ನನ್ನು ಹಿಂದಿನಿಂದ ಬಂದ ಆಗಂತುಕ 9ಎಮ್ಎಮ್ ಪಿಸ್ತೂಲಿನಿಂದ ತಲೆಗೆ ಹಾಗು ಎದೆಗೆ ಗುಂಡು ಹಾರಿಸಿ ಬೈಕ್ನಲ್ಲಿ ಇಬ್ಬರು ಪರಾರಿಯಾಗಿದ್ದರು.
ಸ್ಥಳದಲ್ಲಿ ದೊರೆತ ಸಿಸಿಟಿವಿಯನ್ನು ಆಧರಿಸಿ ಖಾಕಿ ಪಡೆ ತನಿಖೆ ನಡೆಸಿದ ಪೋಲಿಸರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
