ತುಳುನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಆಟಿದ ತಿರ್ಲ್ ಕಾರ್ಯಕ್ರಮ ಪೂರಕ: ಜಯಕರ ಶೆಟ್ಟಿ ಇಂದ್ರಾಳಿ
ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ‘ಆಟಿದ ತಿರ್ಲ್’ನಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಉಡುಪಿ ತುಳುಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಆಟಿದ ತಿರ್ಲ್ 2026’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಳುನಾಡಿನ ಸಂಪ್ರದಾಯ ಮತ್ತು ಆಚರಣೆಗಳನ್ನು ತುಳು ಭಾಷಿಗರೇ ಉಳಿಸಿ ಬೆಳೆಸಬೇಕು. ತುಳು ಭಾಷಿಕರು ತಮ್ಮ ಸಂಸ್ಕೃತಿಯ ಬಗ್ಗೆ ಆಸಕ್ತಿ ವಹಿಸಿ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸಬೇಕು. ತುಳುನಾಡಿನ ಜನರು ಒಗ್ಗಟ್ಟಾಗಿ ನಿರಂತರವಾಗಿ ತುಳುಕೂಟಕ್ಕೆ ಬೆಂಬಲ ನೀಡುವ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮವನ್ನು ಅಮೃತಾ ಪುರುಷೋತ್ತಮ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಹಿಳಾ ಸಾಧಕಿಯರಾದ ಲೀಲಾವತಿ ಹಾಗೂ ಪುಷ್ಪ ಪೂಜಾರಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತುಳುಕೂಟದ ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ, ನಿವೃತ್ತ ಪ್ರಾಂಶುಪಾಲ ಡಾ. ವಿ.ಕೆ. ಯಾದವ್, ಮನೋರಮ ಶೆಟ್ಟಿ, ಶೋಭಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜ್ಯೋತಿ ದೇವಾಡಿಗ ಪ್ರಾರ್ಥನೆ ನೆರವೇರಿಸಿದರು. ತುಳುಕೂಟದ ಸಂಚಾಲಕಿ ವಂದನಾ ವಿಶ್ವನಾಥ್ ಸ್ವಾಗತಿಸಿದರು. ಉಪಾಧ್ಯಕ್ಷ ದಿವಾಕರ್ ಸನಿಲ್ ವಂದಿಸಿದರು. ಯಶೋದಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.
33 ಬಗೆಯ ತುಳುನಾಡಿನ ಖಾದ್ಯಗಳ ರುಚಿ
‘ಆಟಿದ ತಿರ್ಲ್’ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದು ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳ ಭೋಜನ. ಸುಮಾರು 33 ಬಗೆಯ ವಿವಿಧ ತುಳುನಾಡಿನ ಖಾದ್ಯಗಳನ್ನು ತಯಾರಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದವರು ಸಾಂಪ್ರದಾಯಿಕ ತಿನಿಸುಗಳ ರುಚಿಯನ್ನು ಸವಿದರು.
ಉಪ್ಪಿನಕಾಯಿ, ತಿಮರೆ ಚಟ್ನಿ, ಪತ್ರೋಡೆ, ಉಪ್ಪಡ್ ಪಚ್ಚೀರ್, ನುಗ್ಗೆ ಸೊಪ್ಪು ಪಲ್ಯ, ಕಣಲೆ ಪದಂಗಿ ಗಸಿ, ಪುಂಡಿ ಗಸಿ, ಮೆಂತೆ ಗಂಜಿ, ಇಡ್ಲಿ, ಶ್ಯಾವಿಗೆ ಹಾಲು ಸೇರಿದಂತೆ ಹಲವು ಬಗೆಯ ಖಾದ್ಯಗಳು ಭೋಜನದಲ್ಲಿ ವಿಶೇಷ ಮೆರುಗು ನೀಡಿದವು.
ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ತುಳುನಾಡಿನ ಸಂಸ್ಕೃತಿಯ ವೈವಿಧ್ಯತೆಯನ್ನು ಪರಿಚಯಿಸುವ ಮೂಲಕ ‘ಆಟಿದ ತಿರ್ಲ್ 2026’ ಕಾರ್ಯಕ್ರಮ ಗಮನ ಸೆಳೆಯಿತು.
.jpeg)
.jpeg)
.jpeg)