ಚೂಡಿ ಪೂಜೆ ವೇಳೆ ಸೀರೆಗೆ ಬೆಂಕಿ: ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು
Thursday, September 03, 2026
ಶ್ರಾವಣ ಮಾಸದ ಚೂಡಿ ಪೂಜೆ ವೇಳೆ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಿನ್ನಿಮುಲ್ಕಿಯ ವೇಗಸ್ ಟೌನ್ಶಿಪ್ನಲ್ಲಿ ನಡೆದಿದೆ.
ಮೃತರನ್ನು ವೇಗಸ್ ಟೌನ್ಶಿಪ್ ನಿವಾಸಿ ಪದ್ಮನಾಭ ಮಲ್ಯ ಅವರ ಪತ್ನಿ ಜಯಂತಿ ಮಲ್ಯ (80) ಎಂದು ಗುರುತಿಸಲಾಗಿದೆ.
ಆ.16ರಂದು ಜಯಂತಿ ಮಲ್ಯ ಅವರು ಮನೆಯಲ್ಲಿ ತುಳಸಿಕಟ್ಟೆಯಲ್ಲಿ ಶ್ರಾವಣ ಮಾಸದ ಚೂಡಿ ಪೂಜೆ ನೆರವೇರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರ ಸೀರೆಗೆ ಬೆಂಕಿ ತಗುಲಿದೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೆ.1ರಂದು ಸಂಜೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.