
New Delhi: ಚುನಾವಣಾ ಆಯೋಗ-ಬಿಜೆಪಿಯಿಂದ ಮತವಂಚನೆ; ಇಂಡಿಯಾ ಮೈತ್ರಿಕೂಟದಿಂದ ಪಾದಯಾತ್ರೆ; ಪೊಲೀಸರಿಂದ ತಡೆ
11/08/2025
ದೇಶದ ವಿವಿಧ ರಾಜ್ಯಗಳಲ್ಲಿ ಲೋಕಸಭೆ-ವಿಧಾನಸಭೆ ಚುನಾವಣಾ ಸಂದರ್ಭಗಲ್ಲಿ ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಸೇರಿ ಮತ ಕಳ್ಳತನದಲ್ಲಿ ತೊಡಗಿದೆ ಎಂದು ಆರೋಪಿಸಿ ಹಾಗೂ ಬಿಹಾರದಲ್ಲಿ ಮತದಾನ ಪಟ್ಟಿಯ ವಿಶೇಷ ಪರಿಷ್ಕರಣೆ ಹೆಸರಿನಲ್ಲಿ ಹಲವಾರು ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಖಂಡಿಸಿ ಇಂಡಿಯಾ ಮೈತ್ರಿಕೂಟದ 300ಕ್ಕೂ ಅಧಿಕ ಸಂಸತ್ ಸದಸ್ಯರು ಇಂದು ಪಾರ್ಲಿಮೆಂಟ್ ಭವನದಿಂದ ಚುನಾವಣಾ ಆಯೋಗದ ಕಚೇರಿವರೆಗೆ ಪಾದಯಾತ್ರೆ ಹೊರಟರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೇಜಸ್ವಿ ಯಾದವ್, ಅಖಿಲೇಶ್ ಯಾದವ್, ಉದ್ಭವ್ ಠಾಕ್ರೆ, ಪ್ರಿಯಾಂಕ ಗಾಂಧಿ ವಾದ್ರಾ ಸಹಿತ 300ಕ್ಕೂ ಅಧಿಕ ಸಂಸದರ ಈ ಪ್ರತಿಭಟನಾ ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಸಂಸತ್ ಭವನದ ಮಕರ ದ್ವಾರದ ಬಳಿ ರಾಷ್ಟ್ರಗೀತೆ ಹಾಡುವ ಮೂಲಕ ಆರಂಭಗೊಂಡ ಪ್ರತಿಭಟನಾ ಪಾದಯಾತ್ರೆ ದೆಹಲಿಯ ಸಾರಿಗೆ ಭವನದ ಬಳಿ ತಲುಪುತ್ತಿದ್ದಂತೆ, ಪೊಲೀಸರು ಅವರನ್ನು ಬ್ಯಾರಿಕೇಡ್ ಇಟ್ಟು ತಡೆಗೋಡೆ ನಿರ್ಮಿಸಿ ಚುನಾವಣಾ ಆಯೋಗದ ಕಚೇರಿ ಕಡೆ ಹೋಗುವುದರಿಂದ ತಡೆದಿದ್ದಾರೆ.
ಇದು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಮಾಡುವ ಪ್ರತಿಭಟನೆಯಾಗಿದ್ದು, ಇತ್ತೀಚೆಗಷ್ಟೇ ಇಂಡಿಯಾ ಒಕ್ಕೂಟದಿಂದ ಹೊರಹೋದ ಆಪ್ ಪಕ್ಷವನ್ನೂ ಪಾದಯಾತ್ರೆಯಲ್ಲಿ ಸೇರಿಸಿಕೊಳ್ಳುವ ಉದ್ದೇಶದಿಂದ ಇಂಡಿಯಾ ಮೈತ್ರಿಕೂಟದ ಬ್ಯಾನರ್ ಹಿಡಿದಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಆಪ್ ಸಂಸತ್ತಿನಲ್ಲಿ 13 ಸಂಸದರನ್ನು ಹೊಂದಿದೆ.
ಈ ವೇಳೆ ರಾಹುಲ್ ಗಾಂಧಿ ಸಹಿತ ಹಲವು ಸಂಸದರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ.