ಮಾಜಿ ಪ್ರೇಯಸಿಗೆ ಬರ್ತ್ಡೇ ವಿಷ್ ಮಾಡಿದ ಯುವಕನ ಕೊಲೆ
Thursday, January 01, 2026
ಮಾಜಿ ಪ್ರೇಯಸಿಗೆ ಬರ್ತ್ ಡೇ ವಿಶ್ ಮಾಡಿದ ಯುವಕನನ್ನು ಯುವತಿಯ ಅಣ್ಣ ಮತ್ತು ಆಕೆ ಭಾವಿ ಪತಿ ಸೇರಿ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಯುವಕನನ್ನು ಉಡೇವಾ ಗ್ರಾಮದ ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಮೃತ ಮಂಜು ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಆಕೆಯ ಮನೆಯವರು ಇದನ್ನು ವಿರೋಧಿಸಿದ್ದು, ಯುವತಿಗೆ ವೇಣು ಎಂಬ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಆದರೆ, ಕಳೆದ 2 ದಿನಗಳ ಹಿಂದೆ ಆಕೆಯ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದ. ಇದರಿಂದ ಕೆರಳಿದ ಯುವತಿಯ ಅಣ್ಣ ಹಾಗೂ ನಿಶ್ಚಿತಾರ್ಥ ಮಾಡಿಕೊಂಡ ಯುವಕ ವೇಣು ಸೇರಿ ಮಂಜುನಾಥ್ಗೆ ಚಾಕುವಿನಿಂದ ಇರಿದಿದ್ದಾರೆ.
ಕೂಡಲೇ ಆತನನ್ನ ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಜು ಸಾವನ್ನಪ್ಪಿದ್ದಾರೆ.