ಶೀರೂರು ಮಠದಿಂದ ಸಂಪ್ರದಾಯಬದ್ಧ "ಒಲಿಪೆ" ಸಮರ್ಪಣೆ(Video)
Friday, January 16, 2026
ಶೀರೂರು ಪರ್ಯಾಯಕ್ಕೆ ಸಕಲ ತಯಾರಿ ಅಂತಿಮ ಹಂತ ತಲುಪಿದೆ. ಪರ್ಯಾಯ ದ ಸಂದರ್ಭದಲ್ಲಿ ಒಲಿಪೆ ಸಂಪ್ರದಾಯವೊOದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಈ ಒಲಿಪೆ ಸಂಪ್ರದಾಯವನ್ನು ಇಂದು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು.
ಉಡುಪಿಯ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಪರ್ಯಾಯ ಮಠದವರು ಇತರ 7 ಮಠದ ಸ್ವಾಮೀಜಿಗಳನ್ನು ಅನ್ನದಾನಕ್ಕೆ ಆಹ್ವಾನಿಸುವ ವಿಶಿಷ್ಟ ಸಂಪ್ರದಾಯವೇ "ಒಲಿಪೆ ಪದ್ಧತಿ".
ಪರ್ಯಾಯ ಸಂದರ್ಭದಲ್ಲಿ ಆಗಮಿಸುವ ಭಕ್ತರ ಆತಿಥ್ಯಕ್ಕೆ ಪರ್ಯಾಯ ಮಠದಿಂದ ನೀಡುವ ವಸ್ತು ರೂಪದ ಕಾಣಿಕೆಯೇ "ಒಲಿಪೆ". ನಾಡಿನ ಬೇರೆ ಬೇರೆ ಭಾಗದಿಂದ ಬರುವ ಭಕ್ತರು ಬೇರೆ ಬೇರೆ ಮಠಗಳಲ್ಲಿ ತಂಗುತ್ತಾರೆ. ಆಗಮಿಸಿದ ಭಕ್ತರಿಗೆ ಊಟೋಪಚಾರ ಔಷಧೋಪಚಾರ ಹೀಗೆ ಅತ್ಯಗತ್ಯ ದಿನಬಳಕೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಒಲಿಪೆಯಲ್ಲಿ ನೀಡಲಾಗುತ್ತದೆ.
ಸಂಪ್ರದಾಯದOತೆ ಒಂದು ಬುಟ್ಟಿಯಲ್ಲಿ ಮಠದ ದೇವರ ಪೂಜೆಗೆ ಜೋಡು ತೆಂಗಿನಕಾಯಿ, ಸಿಂಗಾರ ಗಂಧದ ಕೊರಡು ಮತ್ತು ಹೂಮಾಲೆ ಇರುತ್ತದೆ. ಮತ್ತೊಂದು ಬುಟ್ಟಿಯಲ್ಲಿ ಪ್ರತಿ ಮಠದ ಪಾರುಪತ್ಯಗಾರರಿಗೆ ನೀಡುವ ವಸ್ತುಗಳು ಇರುತ್ತದೆ. ಉಳಿದಂತೆ ಬೇರೆ ಬೇರೆ ಬುಟ್ಟಿಗಳಲ್ಲಿ ಅಕ್ಕಿ, ಬೇಳೆ, ತರಕಾರಿ, ಬಾಳೆಎಲೆ, ಸೀಯಾಳ, ಹಗ್ಗ, ಔಷದೀಯ ವಸ್ತುಗಳು ಹೀಗೆ ದಿನ ಬಳಕೆಯ ಅಗತ್ಯದ ವಸ್ತುಗಳನ್ನು ನೀಡಲಾಗುತ್ತದೆ.
ಒಂದೆಡೆ ಸಂಪ್ರದಾಯ ಪಾಲನೆಯಾದರೆ ಇನ್ನೊಂದೆಡೆ ಇಂದಿಗೂ ನಾರಿನ ಬುಟ್ಟಿಗಳನ್ನು ಬಳಸುವ ಮೂಲಕ ಗುಡಿಕೈಗಾರಿಕೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗುತ್ತದೆ.
.jpeg)