ತ್ಯಾಜ್ಯ ನೀರು ನಿರ್ವಹಣೆ ಮಾಡದ 376ಕ್ಕೂ ಹೆಚ್ಚು ಅಪಾರ್ಟ್ಮೆಂಟ್ ಗಳಿಗೆ ನೋಟೀಸ್
Friday, February 06, 2026
ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸದೇ ಜನವಸತಿ ಪ್ರದೇಶಗಳಿಗೆ ಬಿಡುತ್ತಿದ್ದ ಸುಮಾರು 376 ಕ್ಕೂ ಹೆಚ್ಚು ಅಪಾರ್ಟ್ಮೆಂಟ್ಗಳಿಗೆ ಉಡುಪಿ ನಗರಸಭೆಯು ನೋಟೀಸ್ ಜಾರಿ ಮಾಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ತಿಳಿಸಿದ್ದಾರೆ.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯಗಳ ತ್ಯಾಜ್ಯ ನೀರು ಜನವಸತಿ ಪ್ರದೇಶಗಳಿಗೆ ಹರಿದು ಸಮಸ್ಯೆಗಳಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರ ಅಧ್ಯಕ್ಷತೆಯಲ್ಲಿ ವಸತಿ ಸಮುಚ್ಚಯಗಳ ಮಾಲಕರೊಂದಿಗೆ ಸಭೆ ನಡೆಸಲಾಯಿತು. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಅಪಾರ್ಟ್ಮೆಂಟ್ ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ 376 ಕ್ಕೂ ಹೆಚ್ಚು ಅಪಾರ್ಟ್ಮೆಂಟ್ ಗಳು ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡದೇ ಮಳೆ ನೀರು ಹರಿಯುವ ತೋಡುಗಳಿಗೆ ಬಿಡುತ್ತಿರುವ ಹಿನ್ನೆಲೆಯಲಲಿ ನಗರ ಸಭೆ ವತಿಯಿಂದ ನೋಟೀಸ್ ನೀಡಲಾಗಿದೆ. ಮಣಿಪಾಲದ 200 ವಸತಿ ಸಮುಚ್ಚಯಗಳು, ಉಡುಪಿ ನಗರದ 105 ವಸತಿ ಸಮುಚ್ಚಯಗಳು, ಮಲ್ಪೆ ವ್ಯಾಪ್ತಿಯ 70 ವಸತಿ ಸಮುಚ್ಚಯಗಳು ಸೇರಿವೆ. ಈ ಸಮುಚ್ಚಯದ ಮಾಲೀಕರು ತ್ಯಾಜ್ಯದ ನಿರ್ವಹಣೆಯನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಸಭೆಯಲ್ಲಿ ಸೂಚಿಸಲಾಯಿತು.
ನಗರಸಭಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಗಳಲ್ಲಿ ಕೊಳಚೆ ನೀರಿನ ಸಂಸ್ಕರಣ ಘಟಕ ಗಳು ಕೆಲವು ಅಪಾರ್ಟ್ಮೆಂಟ್ ಗಳಲ್ಲಿ ಇವೆ. ಆದರೂ ಅವುಗಳನ್ನು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಕೆಲವು ಅಪಾರ್ಟ್ಮೆಂಟ್ ಗಳಲ್ಲಿ ನಿರ್ವಹಣೆ ಘಟಕ ಇಲ್ಲದಿರುವುದು ಕಂಡು ಬಂದಿದೆ. ತ್ಯಾಜ್ಯ ನೀರು ನೇರವಾಗಿ ಕೆರೆ ತೋಡುಗಳಿಗೆ ಸೇರಿ ಸಂಪೂರ್ಣ ಕಲ್ಮಶವಾಗುತ್ತಿದೆ. ನಮ್ಮ ಪರಿಸರವನ್ನು ಸ್ವಚ್ಛ ವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ತ್ಯಾಜ್ಯ ನೀರನ್ನು ಶುದ್ಧಿಕರಿಸಿ ಅವುಗಳನ್ನು ಗಾರ್ಡನ್ ಸೇರಿದಂತೆ ಮತ್ತಿತರ ಗಳಿಗೆ ಮರುಬಳಕೆ ಮುಂದಾಗಬೇಕು ಎಂದು ತಿಳಿಸಲಾಯಿತು.
ನಮ್ಮ ನಗರವನ್ನು ಸ್ವಚ್ಛ ವಾಗಿರಿಸಿಕೊಳ್ಳಬೇಕೆಂಬ ಮನೋಭಾವವನ್ನು ಹೊಂದುವುದರೊOದಿಗೆ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ನೀಡಬೇಕು. ನಗರ ವ್ಯಾಪ್ತಿಯಲ್ಲಿ ಎಲ್ಲಾ ಬಹುಮಹಡಿ ವಸತಿ ಸಮುಚ್ಚಯಗಳು ತ್ಯಾಜ್ಯ ನೀರಿನ ಶುದ್ಧಿಕರಣ ಘಟಕಗಳನ್ನು ನಿರ್ವಹಿಸುವುದರೊಂದಿಗೆ ಜಲಮಾಲಿನ್ಯ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು. ಪ್ರಸ್ತುತ ತ್ಯಾಜ್ಯಗಳನ್ನು ಕಡ್ಡಾಯವಾಗಿ ಸೇಫ್ಟಿ ಟ್ಯಾಂಕ್ ಗಳ ಬಳಕೆ ಯೊಂದಿಗೆ ತ್ಯಾಜ್ಯ ನಿರ್ವಹಣೆಗೆ ಮುಂದಾಗಬೇಕು. ಸಕ್ಕಿಂಗ್ ಯಂತ್ರಗಳ ಬಳಕೆಯೊಂದಿಗೆ ಘನ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿಗೆ ಮುಂದಾಗಬೇಕು.ರಾತ್ರಿ ವೇಳೆಗಳಲ್ಲಿ ತ್ಯಾಜ್ಯ ನೀರನ್ನು ನದಿ ತೋಡು ಗಳಿಗೆ ಬಿಡುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿವೆ. ಇವುಗಳಿಂದ ಕೆಲ ಬಾವಿಗಳ ನೀರು ಕಲುಷಿತಗೊಂಡಿದೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ವಸತಿ ಸಮುಚ್ಚಯದ ಮಾಲಕರಿಗೆ ಸೂಚನೆ ನೀಡಿದರು.