ಕಾರ್ಕಳದಲ್ಲಿ ಸಿಎಂ ಭೇಟಿ ಬಳಿಕ ಬ್ಯಾನರ್ ವಿವಾದ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ
Thursday, February 26, 2026
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಕಳ ಭೇಟಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್ ವಿವಾದವೊಂದು ಹುಟ್ಟಿಕೊಂಡಿದೆ.
ಕಾರ್ಕಳ ಕಾಬೆಟ್ಟು ಪ್ರದೇಶದಲ್ಲಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಸಿಎಂ ನಿನ್ನೆ ಉದ್ಘಾಟಿಸಿದ್ದರು. ಉದ್ಘಾಟನಾ ಸಮಾರಂಭದ ಅಂಗವಾಗಿ ಸಭಾಭವನದ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸರ್ಕಾರಿ ಬ್ಯಾನರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸ್ಥಳೀಯ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಫೋಟೋ ಕಾಣಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.
ಇನ್ನೊಂದೆಡೆ, ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದವರು ಅಂದಿನ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಎಂಬುದೂ ಉಲ್ಲೇಖವಾಗುತ್ತಿದೆ. ಅನುದಾನವನ್ನು ತರಲು ಪ್ರಯತ್ನಿಸಿದವರು ಕಾರ್ಕಳ ಶಾಸಕ ಸುನಿಲ್ ಕುಮಾರ್ ಎಂಬ ಅಭಿಪ್ರಾಯವೂ ವ್ಯಕ್ತವಾಗಿದ್ದು, ಇವರಿಬ್ಬರ ಫೋಟೋಗಳು ಬ್ಯಾನರ್ನಲ್ಲಿ ಇರದೇ ಇರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.
ಸರ್ಕಾರಿ ಕಾರ್ಯಕ್ರಮದ ಬ್ಯಾನರ್ನಲ್ಲಿ ಸ್ಥಳೀಯ ಶಾಸಕರ ಫೋಟೋ ಹಾಕುವುದು ಶಿಷ್ಟಾಚಾರ, ಅದನ್ನು ಬಿಟ್ಟುಬಿಡುವುದು ಶಿಷ್ಟಾಚಾರಕ್ಕೆ ವಿರುದ್ಧ ಎಂಬ ಟೀಕೆಗಳು ಹರಿದಾಡುತ್ತಿವೆ. ಈ ಕುರಿತು ಬೆಂಬಲ–ವಿರೋಧದ ವಾಗ್ವಾದಗಳು ಜೋರಾಗಿದ್ದು, ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿವಾದಕ್ಕೆ ಸಂಬಂಧಿಸಿದಂತೆ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಲಭ್ಯವಾಗಬೇಕಿದೆ.
