ಬೀದಿನಾಯಿ ಶೆಲ್ಟರ್ ನಿರ್ಮಾಣಕ್ಕೆ ವಿರೋಧ: ಉಪ್ಪೂರು ಗ್ರಾಮಸ್ಥರ ಪ್ರತಿಭಟನೆ (Video)
ಉಡುಪಿಯ ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಉಪ್ಪೂರು ಗ್ರಾಮಸ್ಥರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ನಗರಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜಿಲ್ಲಾಡಳಿತವು ಉಪ್ಪೂರಿನಲ್ಲಿ 9 ಎಕರೆ ಪ್ರದೇಶದಲ್ಲಿ ಬೀದಿನಾಯಿಗಳ ಶೆಲ್ಟರ್ ನಿರ್ಮಾಣ ಮಾಡಲು ತಯಾರಿ ನಡೆಸಿದೆ. ಶೆಲ್ಟರ್ ನಿರ್ಮಾಣಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೀದಿ ನಾಯಿಗಳ ಕಾಟದಿಂದ ರೋಸಿ ಹೋಗಿದ್ದ ಜನರಿಗೆ ನೆಮ್ಮದಿ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಜಿಲ್ಲಾಡಳಿತ ಕೈಹಾಕಿತ್ತು. ಸುಮಾರು 18 ಸಾವಿರ ಬೀದಿ ನಾಯಿಗಳನ್ನು ಸಾಕುವ ವ್ಯವಸ್ಥೆಗೆ ಮುಂದಾಗಿತ್ತು. ಇದಕ್ಕೆ ಉಪ್ಪೂರು ಗ್ರಾಮಸ್ಥರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ಉಪ್ಪೂರು ಗ್ರಾಮದಲ್ಲಿ ಹತ್ತಾರು ಎಕರೆ ಸರಕಾರಿ ಭೂಮಿ ಇದೆ. ನಮ್ಮೂರಿಗೆ ಬೀದಿನಾಯಿ ಶೆಲ್ಟರ್ ಬೇಡ. ಮಹಾನಗರ ಪಾಲಿಕೆಯಾದಾಗ ನಮ್ಮ ಊರು ಅಭಿವೃದ್ಧಿಯಾಗುತ್ತೆ. ಬೀದಿ ನಾಯಿಗಳ ಶೆಲ್ಟರ್ ನಿರ್ಮಾಣ ಮಾಡಿದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಉಪ್ಪೂರು ನಗರ ಪ್ರಾಧಿಕಾರದಿಂದ ನೋಟಿಫೈಡ್ ಆಗಿದೆ. ಊರಿಗೆ ಬರಬೇಕಾಗಿದ್ದ ವಿಶ್ವವಿದ್ಯಾಲಯ ಉಪವಿಭಾಗ ರದ್ದಾಗಿದೆ. ಪೊಲೀಸ್ ಕ್ವಾಟ್ರಸ್, ಕಾಲೇಜುಗಳು ಕೂಡಾ ರದ್ದಾದವು. ಆದರೆ ನಮ್ಮೂರಲ್ಲಿ ಬೀದಿ ನಾಯಿ ಶೆಲ್ಟರ್ ಮಾಡ್ತಾರಂತೆ. ಗ್ರಾಮದ ನೆಮ್ಮದಿ ಕೆಡಿಸುವ ಬೀದಿ ನಾಯಿ ಶೆಲ್ಟರ್ ಬೇಡ. ಒಂದೇ ಪರಿಸರದಲ್ಲಿ ಸಾವಿರಾರು ನಾಯಿಗಳು ಬರುವುದರಿಂದ ಗ್ರಾಮದ ನೆಮ್ಮದಿ ನಾಶವಾಗುತ್ತದೆ. ನಮ್ಮದು ಕುಗ್ರಾಮವಲ್ಲ ಅಭಿವೃದ್ಧಿಗೆ ಅವಕಾಶ ಇರುವ ಗ್ರಾಮ. ಶೆಲ್ಟರ್ ನಿರ್ಮಾಣ ಬಗ್ಗೆ ಗ್ರಾಮ ಪಂಚಾಯತ್ ಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು
ಉಪ್ಪೂರು ಗ್ರಾಮದ ಬಡ ಜನರಿಗೆ ಭೂಮಿ ಕೊಡಿ, ಹಕ್ಕುಪತ್ರ ಕೊಡಿ. ಮೊದಲು ಜನರ ಕಾಳಜಿ ನಂತರ ನಾಯಿ ಶೆಲ್ಟರ್ ಮಾಡಿ. ಬೀದಿ ನಾಯಿ ಶೆಲ್ಟರ್ ಯೋಜನೆ ಬೇರೆ ನಿರ್ಜನ ಪ್ರದೇಶಕ್ಕೆ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು.