ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ
Friday, May 22, 2026
ಜೂನ್ ಮತ್ತು ಜುಲೈ ತಿಂಗಳಿನಲ್ಲಿ ರಾಜ್ಯಸಭೆ ಸದಸ್ಯರ ನಿವೃತ್ತಿಯಿಂದ ಮತ್ತು ಅವಧಿ ಪೂರ್ಣಗೊಳ್ಳುವುದರಿಂದಾಗಿ ಖಾಲಿಯಾಗಲಿರುವ ಕರ್ನಾಟಕವೂ ಸೇರಿ ಹತ್ತು ರಾಜ್ಯಗಳ 24 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಘೋಷಣೆ ಹೊರಡಿಸಿದೆ. ಜೂನ್ 1 ರಂದು ಈ ಕುರಿತು ಅಧಿಕೃತ ಅಧಿಸೂಚನೆ ಹೊರ ಬೀಳಲಿದೆ.
ಕರ್ನಾಟಕದಿಂದ ಹೆಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಈರಣ್ಣ ಕಡಾಡಿ, ನಾರಾಯಣ ಕೊರಗಪ್ಪ ಅವರುಗಳ ರಾಜ್ಯಸಭೆ ಸದಸ್ಯತ್ವದ ಅವಧಿ ಜೂನ್ 25 ರಂದು ಮುಗಿಯಲಿದೆ. ಇನ್ನುಳಿದಂತೆ ಆಂಧ್ರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಮೇಘಾಲಯ, ಮಿಜೋರಾಂ, ಮಣಿಪುರ ರಾಜ್ಯಗಳು ಸೇರಿದ್ದು, ಇದೇ ಜೂನ್ ನಲ್ಲಿ (ಮಿಜೋರಾಂ ಜುಲೈ 19) ಖಾಲಿಯಾಗುವ 24 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಜೂನ್ 8 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರೆ, ಜೂನ್ 9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 11 ನಾಮಪತ್ರವನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಜೂನ್ 18 ರಂದು ಬೆಳಗ್ಗೆ 9 ರಿಂದ ಸಾಯಂಕಾಲ 4ಗಂಟೆಯವರೆಗೆ ಮತದಾನ ನಡೆಯಲಿದೆ. ಜೊತೆಗೆ ಅದೇ ದಿನ ಸಂಜೆ 5 ಗಂಟೆಯ ಹೊತ್ತಿಗೆ ಮತ ಎಣಿಕೆ ಕಾರ್ಯವೂ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.