ಪಾರ್ಶ್ವವಾಯು ಪೀಡಿತ ಕಾರ್ಮಿಕನ ಅತಂತ್ರ ಸ್ಥಿತಿ: ತುರ್ತು ಸ್ಪಂಧಿಸಲು ಜಿಲ್ಲಾಡಳಿತಕ್ಕೆ ಆಗ್ರಹ
ಪಾರ್ಶ್ವವಾಯು ಪೀಡಿತ ಕೇರಳ ಮೂಲದ ರಾಯಲ್ ಪೌಲ್ ಎಂಬ ವ್ಯಕ್ತಿಯು ಅತ್ತ ಮನೆಯ ಸಂಪರ್ಕವೂ ಸಾಧ್ಯವಾಗದೇ ಇತ್ತ ಸರ್ಕಾರಿ ಅನುದಾನಿತ ಆಶ್ರಮದಲ್ಲಿ ಆಶ್ರಯವಿಲ್ಲದೆ ಅತಂತ್ರ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
ಪಾರ್ಶ್ವವಾಯು ಪೀಡಿತರಾಗಿ ಉಡುಪಿ ಆಸ್ಪತ್ರೆಗೆ ದಾಖಲಾಗಿದ್ದ ರಾಯಲ್ ಅವರ ನೆರವಿಗೆ ಬಂದಿದ್ದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರು ರೋಗಿಯೊಂದಿಗೆ ಅಂಬುಲೆನ್ಸ್ ಮೂಲಕವೇ ಉಡುಪಿ ಪತ್ರಿಕಾಭವನಕ್ಕೆ ಆಗಮಿಸಿ, ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ ವ್ಯಕ್ತಿಯ ಆರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಕೇರಳದ ಎರ್ನಾಕುಳಂ ಜಿಲ್ಲೆಯ ಮುನಾಟ್ಟುಪುಳದ ರಾಯಲ್ ಪೌಲ್ ಎಂಬವರು ಕೂಲಿ ಕಾರ್ಮಿಕರಾಗಿ ಕಾರ್ಕಳದ ಅನಾನಸ್ ತೋಟಕ್ಕೆ ಬಂದಿದ್ದರು. ಸುಮಾರು ಮೂರು ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಪಾರ್ಶ್ಚಾವಾಯುವಿಗೆ ಒಳಗಾಗಿದ್ದಾರೆ. ಅನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈಗ ಖಾಸಗಿ ಆಶ್ರಮದಲ್ಲಿ ಅವರಿಗೆ ಆರೈಕೆ ನೀಡಬೇಕಾದರೆ ತಿಂಗಳಿಗೆ ಸುಮಾರು ₹25 ಸಾವಿರ ಖರ್ಚು ಇದೆ. ಅದು ಭರಿಸುವುದು ಕಷ್ಟವಾಗಿದೆ. ಆದರೆ ಸರರ್ಕಾರಿ ಅನುದಾನಿತ ಆಶ್ರಮದಲ್ಲಿ ಹಾಸಿಗೆ ಹಿಡಿದ ರೋಗಿಗಳನ್ನು ದಾಖಲಾತಿ ಮಾಡಿಕೊಳ್ಳುವುದಿಲ್ಲ. ಈ ಕಾರಣಕ್ಕಾಗಿ ಈಗ ರಾಯಲ್ ಪೌಲ್ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರ ಸಂಬಂಧಿಕರನ್ನು ಹುಡುಕಾಟದ ಪ್ರಯತ್ನ ನಡೆಸಿದರು ಪ್ರಯೋಜನವಾಗಿಲ್ಲ ಎಂದು ವಿಶುಶೆಟ್ಟಿ ತಿಳಿಸಿದ್ದಾರೆ.
ಕೂಡಲೇ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಎಚ್ಚೆತ್ತುಕೊಂಡು ರೋಗಿಯನ್ನು ಸರ್ಕಾರಿ ಅನುದಾನಿತ ಆಶ್ರಮಕ್ಕೆ ಸೇರಿಸಿ ಅಗತ್ಯ ಆರೈಕೆಗೆ ವ್ಯವಸ್ಥೆ ಮಾಡಬೇಕು ಅಥವಾ ಅವರನ್ನು ಖಾಸಗಿ ಆಶ್ರಮಕ್ಕೆ ಸೇರಿಸಿ ಅದರ ಶುಲ್ಕವನ್ನು ಸರ್ಕಾರವೇ ಪಾವತಿಸುವಂತೆ ಆಗಬೇಕು ಎಂದು ಒತ್ತಾಯಿಸಿದರು.
ರಾಯಲ್ ಪೌಲ್ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ಕೂಲಿ ಕೆಲಸಕ್ಕಾಗಿ ಕಾರ್ಕಳದ ಅನಾನಸು ತೋಟಕ್ಕೆ ಬಂದಿದ್ದೇನೆ. ಪಾರ್ಶ್ವವಾಯು ಆದ ಬಳಿಕ ನನ್ನನ್ನು ಆಸ್ಪತ್ರೆಗೆ ಸೇರಿಸಿ ಹೋದ ತೋಟದ ಮಾಲೀಕರು ಅನಂತರ ತಿರುಗಿ ನೋಡಿಲ್ಲ. ಊರಿನಲ್ಲಿ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಈಗ ಅವರು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಅವರೊಂದಿಗೆ ಸಂಪರ್ಕವಿಲ್ಲ ಎಂದು ಹೇಳಿದರು.
