ಬುರ್ಖಾಧಾರಿ ಮಹಿಳೆಯರು ಸಚಿವರನ್ನೇ ಯಾಮಾರಿಸಿದ್ದಾರೆ: ಯಶ್ಪಾಲ್ ಸುವರ್ಣ
ತನ್ನ ಸ್ವಂತ ತಾಯಿಯನ್ನೇ ನೆರೆಮನೆಯವರು ಎಂದು ಹೇಳುವ ಮೂಲಕ ಬುರ್ಖಾಧಾರಿ ಮಹಿಳೆಯರು ಸಚಿವರನ್ನೇ ಯಾಮಾರಿಸಿದ್ದಾರೆ. ಆದರೆ ಸತ್ಯಾಸತ್ಯತೆ ತಿಳಿಯದೇ ಸಚಿವೆ ಹೆಬ್ಬಾಳ್ಕರ್ ಸೌಹಾರ್ದತೆಯ ಪಾಠ ಮಾಡಿ ಪೇಚಿಗೆ ಸಿಲುಕಿದ್ದಾರೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಯಿಯನ್ನೇ ನೆರೆಮನೆಯವರೆಂದು ತಪ್ಪು ಮಾಹಿತಿ ನೀಡುವುದು ಅಕ್ಷಮ್ಯ. ಜಿಲ್ಲೆಗೆ ಅತಿಥಿಯಾಗಿ ಆಗಮಿಸುವ ಉಸ್ತುವಾರಿ ಸಚಿವರು ಬಿಜೆಪಿ ಜನಪ್ರತಿನಿಧಿಗಳನ್ನು ಕಾಮಾಲೆ ಕಣ್ಣಿನಿಂದ ನೋಡುತ್ತಾರೆ ಹಾಗೂ ಕೋಮುವಾದಿಗಳು ಎಂಬಂತೆ ಬಿಂಬಿಸಲು ಹೊರಟಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.
ಘಟನೆಯ ಸತ್ಯ ಸತ್ಯತೆ ತಿಳಿಯದೆ ಮಾಧ್ಯಮದ ಎದುರು ಬಿಜೆಪಿ ಪಕ್ಷಕ್ಕೆ ಸೌಹಾರ್ದತೆಯ ಪಾಠ ಮಾಡಲು ಹೋಗಿ ಉಸ್ತುವಾರಿ ಸಚಿವರು ಪೇಚಿಗೆ ಸಿಲುಕಿದ್ದಾರೆ. ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಸೌಹಾರ್ದತೆಯ ಬಗ್ಗೆ ಬೆಳಗಾವಿಯಿಂದ ಆಗಮಿಸಿದ ಹೆಬ್ಬಾಳ್ಕರ್ ಬಳಿ ಪಾಠ ಕಲಿಯುವ ಅನಿವಾರ್ಯತೆ ಬಂದಿಲ್ಲ.
ಈ ಘಟನೆಯ ಬಗ್ಗೆ ಉನ್ನತಮಟ್ಟದ ತನಿಖೆಯಯ ಅಗತ್ಯವಿದೆ. ಸ್ವಂತ ತಾಯಿಯನ್ನೇ ನೆರೆಮನೆಯವ್ರೆಂದು ಹೇಳುವ ಹಿಜಾಬ್ ಬುರ್ಖಾಧಾರಿ ಮಹಿಳೆಯರ ಮನಸ್ಥಿತಿಯನ್ನು ಜಿಲ್ಲೆಯ ಪ್ರಜ್ಞಾವಂತ ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ.
ಉಡುಪಿ ಜಿಲ್ಲೆಯ ಐದು ಮಂದಿ ಬಿಜೆಪಿ ಶಾಸಕರು ಜಿಲ್ಲೆಯ ಸಂಸದರು ಎಂದಿಗೂ ತಮ್ಮ ಕಚೇರಿಗೆ ಆಗಮಿಸಿದವರ ಜಾತಿ ಮತ ಕೇಳಿಲ್ಲ ಯಾವತ್ತು ತಾರತಮ್ಯ ಮಾಡಿಲ್ಲ. ಆದರೆ ರಾಷ್ಟ್ರೀಯತೆ ವಿಚಾರದಲ್ಲಿ ಮತೀಯವಾದ ಶಕ್ತಿಗಳು ಹಾಗೂ ಹಿಂದುತ್ವ ವಿರೋಧಿಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಮುಂದೆಯೂ ರಾಜಿ ಮಾಡಲು ಸಿದ್ಧವಿಲ್ಲ.
ಈ ಘಟನೆಯನ್ನು ಗಮನಿಸಿದಾಗ ಮುಂದಿನ ದಿನಗಳಲ್ಲಿ ಸರಕಾರಿ ಕಚೇರಿಗಳಲ್ಲಿ ಬುರ್ಖಾ ಹಾಗೂ ಹಿಜಾಬ್ ಧರಿಸುವ ವ್ಯಕ್ತಿಗಳ ಬಗ್ಗೆ ವಿಶೇಷ ನಿಗ ವಹಿಸುವ ಸನ್ನಿವೇಶ ನಿರ್ಮಾಣವಾಗಲಿದೆ. ಘಟನೆಯ ಸತ್ಯತೆ ತಿಳಿಯದೆ ಬಿಜೆಪಿ ವಿರುದ್ಧ ಅಪಮಾನಕರ ಹೇಳಿಕೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಕ್ಷಮೆಯಾಚಿಸಬೇಕು ಎಂದರು.
ಉಸ್ತುವಾರಿ ಸಚಿವರ ಇಂತಹ ಬೇಜವಾಬ್ದಾರಿ ಹೇಳಿಕೆಗಳು ಮುಂದುವರಿದರೆ ಜಿಲ್ಲಾ ಬಿಜೆಪಿ ವತಿಯಿಂದ ಮುಂದಿನ ಬಾರಿ ಭೇಟಿ ನೀಡಿ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.