-->
ಕೊಡವೂರು ಮಹಾರುದ್ರಯಾಗ: ಬೀಚ್ ಕ್ರೀಡೋತ್ಸವಕ್ಕೆ ಎಸ್ಪಿ ಹರಿರಾಂ ಶಂಕರ್ ಚಾಲನೆ

ಕೊಡವೂರು ಮಹಾರುದ್ರಯಾಗ: ಬೀಚ್ ಕ್ರೀಡೋತ್ಸವಕ್ಕೆ ಎಸ್ಪಿ ಹರಿರಾಂ ಶಂಕರ್ ಚಾಲನೆ


ಕೊಡವೂರು ಮಹತೋಭಾರ ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿರುವ ಮಹಾರುದ್ರಯಾಗದ ಪ್ರಯುಕ್ತ ಮಲ್ಪೆ ಬೀಚ್ ನಲ್ಲಿ ಇಂದು ಬೆಳಿಗ್ಗೆ ಬೀಚ್ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. 


ಕ್ರೀಡೋತ್ಸವಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಮಕ್ಕಳು ಮೊಬೈಲ್ ಅನ್ನು ಪಕ್ಕಕ್ಕಿಟ್ಟು ಲಗೋರಿಯಂತಹ ಕ್ರೀಡಾ ಚಟುವಟಿಕೆಗಳಲ್ಲಿ‌ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢಗೊಳ್ಳುತ್ತದೆ ಎಂದರು.


ಮಹಾರುದ್ರಯಾಗದ ಜೊತೆ ಕ್ರೀಡೆಯಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಬಹಳ ಸಂತೋಷದ ವಿಚಾರ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಆಯೋಜನೆಗೊಳ್ಳಬೇಕು. ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರ, ಪ್ರೋತ್ಸಾಹ ಸದಾ ಇರಲಿದೆ ಎಂದರು. 

ಮಹಾರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಮಕ್ಕಳಿಗೆ ಧಾರ್ಮಿಕತೆಯ ಜೊತೆಗೆ ಸಾಮಾಜಿಕ ಬದ್ಧತೆಯನ್ನು ಕಲಿಸಬೇಕು. ಕರಾವಳಿ ಜಿಲ್ಲೆಯ ಮಕ್ಕಳ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಲಭಿಸುತ್ತಿಲ್ಲ. ಮಕ್ಕಳನ್ನು ವಿದ್ಯಾವಂತರನ್ನಾಗಿ‌ ಮಾಡುವುದರ ಜೊತೆ ಅವರಿಗೆ ಸೂಕ್ತ ಉದ್ಯೋಗ ಕಲ್ಪಿಸುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ನಾಳೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದ್ದೇವೆ. ಏಳೂವರೆ ಸಾವಿರ ಉದ್ಯೋಗ ಅವಕಾಶಗಳು ಲಭ್ಯವಿರಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಕಲಿತಿರುವ ಮಕ್ಕಳಿಗೆ ಹೆಚ್ಚು‌ ಆದ್ಯತೆ ಸಿಗುವ ಉದ್ಯೋಗವನ್ನು ಕಲ್ಪಿಸುತ್ತಿದ್ದೇವೆ ಎಂದರು.

ಕ್ರೀಡಾ ಸಮಿತಿ ಸಂಚಾಲಕ ಶಾನ್ ರಾಜ್ ಕೋಟ್ಯಾನ್, ಸಮಾಜ ಸೇವಕ ಪಾಡುರಂಗ ಮಲ್ಪೆ, ಸಮಿತಿಯ ಸಂಚಾಲಕರಾದ ತಾರಾನಾಥ ಪೂಜಾರಿ, ನಂದಕಿಶೋರ್ ಮೊದಲಾದವರು‌ ಉಪಸ್ಥಿತರಿದ್ದರು. ಸತೀಶ್ ಚಿತ್ರಾಪುರ ಕಾರ್ಯಕ್ರಮ ನಿರೂಪಿಸಿದರು.

ಲಗೋರಿ, ಕೈರಂಪಣಿ ಬಲೆ ಬೀಸುವ ಸ್ಪರ್ಧೆ, ಮರಳಿನಲ್ಲಿ ಶಿವನ ಕಲಾಕೃತಿ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.




Ads on article

Advertise in articles 1

advertising articles 2

Advertise under the article