ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವಾಗಬೇಕು: ಪೇಜಾವರ ಶ್ರೀ
ಸಂಸ್ಕಾರ ಹಿರಿಯರಿಂದ ಬಂದ ಬಳುವಳಿ. ಇದನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು ಹೇಳಿದರು.
ಮಲ್ಪೆ ಕಡಲ ತೀರದ ಆನಂದ ಶರಧಿಯಲ್ಲಿ ಭಾನುವಾರ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟ ಹಾಗೂ ಭಜನಾ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪ್ರತಿ ವರ್ಷ ಈ ರೀತಿಯ ಸಾಂಪ್ರದಾಯಿಕ ಉತ್ಸವ ನಡೆಯುತ್ತಿರಬೇಕು. ಪ್ರಸ್ತುತ ಕೃಷ್ಣನ ಪರಿಸರ ಮಲ್ಪೆ ತನಕ ವಿಸ್ತರಿಸಿದೆ. ಮುಂದಿನ ದಿನಗಳಲ್ಲಿ ಕೃಷ್ಣ ಮಠದ ರಥ ಆನಂದ ಶರಧಿವರೆಗೆ ಬಂದರೂ ಅಚ್ಚರಿಯಿಲ್ಲ ಎಂದು ಹೇಳಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ , ಪರಿಸರ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್, ವಾಗ್ಮಿ ಪ್ರಕಾಶ್ ಮಲ್ಪೆ, ಉದ್ಯಮಿಗಳಾದ ಬಾಲಾಜಿ ರಾಘವೇಂದ್ರ ಆಚಾರ್ಯ, ಗಂಗಾಪ್ರಸಾದ್, ಮನೋಹರ್ ಶೆಟ್ಟಿ, ಪ್ರಸಾದ್ರಾಜ್ ಕಾಂಚನ್, ಆನಂದ ಪಿ. ಸುವರ್ಣ, ಕೊಡವೂರು ದಿವಾಕರ ಶೆಟ್ಟಿ ತೋಟದಮನೆ , ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮತ್ತು ಲೆಕ್ಕಪರಿಶೋಧಕ ಗಣೇಶ್ ಹೆಬ್ಬಾರ್, ಹರಿಯಪ್ಪ ಕೋಟ್ಯಾನ್, ವಾಸುದೇವ ಭಟ್, ಶ್ರೀನಿವಾಸ ಭಟ್, ಗೀತಾ ವಾಗ್ಲೆ, ನೀತಾ ಪ್ರಭು, ಸಂಘಟನಾ ಕಾರ್ಯದರ್ಶಿ ಗೋವಿಂದ ರಾಜ್ ಉಪಸ್ಥಿತರಿದ್ದರು.
ಷಣ್ಮುಖ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.