ಗಡಾಯಿಕಲ್ಲಿನ ಮೇಲ್ಭಾಗದಲ್ಲಿ ಸಿಲುಕಿಕೊಂಡ ಚಾರಣಿಗನ ರಕ್ಷಣೆ
Friday, June 05, 2026
ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಚಾರಣ ತಾಣ ಗಡಾಯಿಕಲ್ಲಿನಲ್ಲಿ ಚಾರಣಕ್ಕೆ ತೆರಳಿದ್ದ ಪ್ರವಾಸಿಗನೊಬ್ಬ ಕಾಲು ನೋವು ಉಂಟಾಗಿ ಮೇಲ್ಭಾಗದಲ್ಲೇ ಸಿಲುಕಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ.
ತಣ್ಣೀರುಪಂಥ ಗ್ರಾಮದ ಜನತಾ ಕಾಲೋನಿ ಪ್ರದೇಶದ ನಾಲ್ವರು ಸ್ನೇಹಿತರು ಗಡಾಯಿಕಲ್ಲಿಗೆ ಚಾರಣಕ್ಕೆ ತೆರಳಿದ್ದರು. ಸುಮಾರು 1,500 ಮೆಟ್ಟಿಲುಗಳನ್ನು ಏರಿ ಮೇಲ್ಭಾಗ ತಲುಪಿದ ಬಳಿಕ, ಮಹಮ್ಮದ್ ಶರೀಫ್ ಎಂಬ 30 ವರ್ಷದ ಯುವಕನ ಕಾಲು ಉಳುಕಿದ್ದು, ಅವರಿಗೆ ಸ್ವತಃ ಕೆಳಗಿಳಿಯಲು ಸಾಧ್ಯವಾಗಲಿಲ್ಲ.
ತಕ್ಷಣ 112 ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬೆಳ್ತಂಗಡಿ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ, ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದರು.
ಸುಮಾರು ಮೂರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ, ರಕ್ಷಣಾ ತಂಡವು ಮಹಮ್ಮದ್ ಶರೀಫ್ ಅವರನ್ನು ಹೊತ್ತುಕೊಂಡೇ ಸುರಕ್ಷಿತವಾಗಿ ಕೆಳಭಾಗಕ್ಕೆ ಕರೆತಂದಿತು.
ಬಳಿಕ ಆಂಬುಲೆನ್ಸ್ ಮೂಲಕ ಅವರನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.