ಮರ ಬಿದ್ದು ಹಾನಿಗೀಡಾದ ಮಲ್ಪೆ ಅಂಗನವಾಡಿ ಕೇಂದ್ರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ
ಗಾಳಿ-ಮಳೆಯಿಂದ ಮರ ಬಿದ್ದು ಹಾನಿಗೀಡಾದ ಮಲ್ಪೆ ಫಿಷರೀಸ್ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಇತ್ತೀಚೆಗೆ ಸುರಿದ ಭಾರೀ ಗಾಳಿ-ಮಳೆಯಿಂದ ಅಂಗನವಾಡಿ ಕೇಂದ್ರದ ಮೇಲ್ಛಾವಣಿಗೆ ಮರ ಬಿದ್ದ ಪರಿಣಾಮ ಕಟ್ಟಡಕ್ಕೆ ಹಾನಿಯಾಗಿತ್ತು. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಂಗನವಾಡಿ ಕೇಂದ್ರವನ್ನು ತಾತ್ಕಾಲಿಕವಾಗಿ ಪ್ರೌಢಶಾಲೆ ವಿಭಾಗದ ರಂಗಮಂದಿರಕ್ಕೆ ಸ್ಥಳಾಂತರಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು.
ಇದೇ ವೇಳೆ, ಶಾಶ್ವತ ಪರಿಹಾರದ ದೃಷ್ಟಿಯಿಂದ ನೂತನ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಕಂದಾಯ ಇಲಾಖೆಯ ಮೂಲಕ ಸೂಕ್ತ ನಿವೇಶನವನ್ನು ತಕ್ಷಣ ಗುರುತಿಸಿ, ಅಗತ್ಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರವೀಣ್ ಹೇರೂರು, ಮಾಜಿ ನಗರಸಭೆ ಸದಸ್ಯರಾದ ಎಡ್ಲಿನ್ ಕರ್ಕಡ, ಸುಂದರ ಕಲ್ಮಾಡಿ, ನಾರಾಯಣ ಕುಂದರ್, ಸ್ಥಳೀಯ ಪ್ರಮುಖರಾದ ಲಕ್ಷ್ಮೀಶ ಬಂಗೇರ, ವಿನಯ ಕುಮಾರ್, ಸುಶಾಂತ್, ಮಂಜು ಕೊಳ, ಸುರೇಶ್ ಕುಂದರ್, ಕೃಷ್ಣಪ್ಪ ಜತ್ತನ್, ನಿತಿನ್ ಪೂಜಾರಿ, ಸುಧಾಕರ ಕುಂದರ್, ವಿನೋದ್ ಹೊಸಕಟ್ಟ, ಅಂಗನವಾಡಿ ಕಾರ್ಯಕರ್ತೆ ರಾಧಿಕಾ ಕೋಟ್ಯಾನ್ ಹಾಗೂ ಸಹಾಯಕಿ ರೇಣುಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.